ADVERTISEMENT

ಶಿವಮೊಗ್ಗ: ಭಾರಿ ಮಳೆಯಿಂದಾಗಿ ಪ್ರವಾಹದ ಸನಿಹಕ್ಕೆ ತುಂಗೆ

ತೀರ್ಥಹಳ್ಳಿ ತಾಲ್ಲೂಕು ಬಿದರಗೋಡು- ಗುಡ್ಡೇಕೇರಿ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 4:39 IST
Last Updated 16 ಜುಲೈ 2021, 4:39 IST
ಶಿವಮೊಗ್ಗದ ಕೋರ್ಪಳಯ್ಯನ ಛತ್ರದ ಬಳಿ ಮುಳುಗುವ ಹಂತ ತಲುಪಿದ ಮಂಟಪ.
ಶಿವಮೊಗ್ಗದ ಕೋರ್ಪಳಯ್ಯನ ಛತ್ರದ ಬಳಿ ಮುಳುಗುವ ಹಂತ ತಲುಪಿದ ಮಂಟಪ.   

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಮೂರು ದಿನಗಳಿಂದ ನಿರಂತರ ಮಳೆ ಸರಿಯುತ್ತಿರುವ ಕಾರಣ ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬರುತ್ತಿದೆ. ತುಂಗಾ ಜಲಾಶಯದಿಂದ 20 ಕ್ರಸ್ಟ್‌ಗೇಟ್‌ಗಳ ಮೂಲಕ 41,700 ಕ್ಯುಸೆಕ್‌ ನೀರು ನದಿಗೆ ಬಿಡಲಾಗಿದ್ದು, ಶಿವಮೊಗ್ಗದ ಕೋರ್ಪಳಯ್ಯನ ಛತ್ರದ ಮಂಟಪ ಮುಳುಗುತ್ತಿದೆ.

ನಗರದ ವಿವಿಧೆಡೆ ಸ್ಮಾರ್ಟ್‌ ಸಿಟಿ ಕೆಲಸ ನಡೆಯುತ್ತಿದ್ದು, ಮಳೆ ಕಾರಣ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿವೆ. ನೀರು ತುಂಬಿದ ಗುಂಡಿಗಳ ಅರಿವಿಲ್ಲದೆ ಹಲವು ವಾಹನಗಳು ಅಪಘಾತಕ್ಕೆ ಒಳಗಾಗಿವೆ. ಕೆಲವರು ಗಾಯಗೊಂಡಿದ್ದಾರೆ. ನದಿ ನೀರಿನ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ, ಜಿಲ್ಲಾಡಳಿತ ರೆಡ್‌ ಅಲರ್ಟ್‌ ಘೋಷಿಸಿದೆ.

ತೀರ್ಥಹಳ್ಳಿಯಲ್ಲಿ ಭಾರಿ ಮಳೆ, ಪ್ರವಾಹ ಮಟ್ಟದಲ್ಲಿ ತುಂಗೆ: ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗೆ, ಮಾಲತಿ, ಕುಶಾವತಿ ಪ್ರವಾಹಮಟ್ಟದಲ್ಲಿ ಹರಿಯುತ್ತಿವೆ. ಮಾಲತಿ ನದಿ ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು ನಾಬಳ ಗ್ರಾಮದಲ್ಲಿ ಸೇತುವೆ ಮುಳುಗಿದ ಪರಿಣಾಮ ಬಿದರಗೋಡು- ಗುಡ್ಡೇಕೇರಿ ಸಂಪರ್ಕ ಕಡಿತವಾಗಿದೆ.

ADVERTISEMENT

ಗುರುವಾರ ಆಗುಂಬೆಯಲ್ಲಿ 15.8 ಸೆಂ.ಮೀ, ತೀರ್ಥಹಳ್ಳಿ ಪಟ್ಟಣದಲ್ಲಿ 9.7 ಸೆಂ.ಮೀ ಮಳೆ ಸುರಿದಿದೆ. ಗುರುವಾರ ಬೆಳಗೆ ಸ್ವಲ್ಪ ಬಿಡುವಾಗಿದ್ದ ಮಳೆ ಮದ್ಯಾಹ್ನ ಮತ್ತಷ್ಟು ಜೋರಾಗಿದೆ. ಪಟ್ಟಣದಲ್ಲಿ ತುಂಗಾನದಿ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದ್ದು ಪುರಾಣ ಪ್ರಸಿದ್ಧ ರಾಮಮಂಟಪ ಮುಳುಗುವ ಸನಿಹದಲ್ಲಿದೆ. ಕುಡುಮಲ್ಲಿಗೆ, ಹೆನ್ನಂಗಿ ಗ್ರಾಮ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಒಟ್ಟು 6 ಮನೆಗೆ ಭಾಗಶಃ ಹಾನಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.