
ರಿಪ್ಪನ್ಪೇಟೆ: ‘ಪೂರ್ವಜರ ತ್ಯಾಗ– ಬಲಿದಾನಗಳ ಸಂಕೇತವೇ ಹಿಂದೂ ಧರ್ಮದ ಪುನರುತ್ಥಾನದ ಜೀವಂತಿಕೆಗೆ ಸಾಕ್ಷಿಯಾಗಿದೆ’ ಎಂದು ಬೆಂಗಳೂರಿನ ಹಾರಿಕಾ ಮಂಜುನಾಥ್ ಅಭಿಪ್ರಾಯಪಟ್ಟರು.
ಸೋಮವಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪರಕೀಯರ ದಾಸ್ಯದ ಸಂಕೋಲೆಯ ಸುಳಿಗೆ ಸಿಲುಕಿ, ನಿರಂತರ ದಾಳಿಗಳ ನಡುವೆಯೂ ಹಿಂದೂ ಧರ್ಮ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವೇದ, ಪುರಾಣ, ಉಪನಿಷತ್ಗಳು, ಆದಿ ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ ಗ್ರಂಥ, ಬಸವಾದಿ ಶರಣರ ವಚನಗಳು, ಸಾಧು–ಸಂತರ, ಋಷಿಮುನಿಗಳ ಹಾಗೂ ದಾರ್ಶನಿಕರ ಚಿಂತನೆಗಳು ಈ ಸನಾತನ ಧರ್ಮದ ಮೂಲ ಬೇರುಗಳಿದ್ದಂತೆ. ಇವುಗಳನ್ನು ಕಾಪಿಟ್ಟು ಮುಂದಿನ ತಲೆಮಾರಿಗೂ ತಲುಪಿಸುವ ಗುರುತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ’ ಎಂದು ಹೇಳಿದರು.
‘ಜಾತಿ, ಮತ, ಪಂಥ, ಪಂಗಡಗಳ ಮಡಿವಂತಿಕೆಯನ್ನು ಮನೆಯೊಳಗೆ ಸೀಮಿತಗೊಳಿಸಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ನಾವೆಲ್ಲರೂ ಹಿಂದೂ ಧರ್ಮೀಯರೆಂಬ ಭಾವ ಪ್ರತಿಯೊಬ್ಬ ಪ್ರಜೆಯಲ್ಲೂ ಕಾಣಬೇಕು. ಹಿಂದೂ ಧರ್ಮದ ಅಡಿಪಾಯದಂತಿರುವ ಆರ್ಎಸ್ಎಸ್ ಈ ದೇಶದ ಅತ್ಯಂತ ದೊಡ್ಡ ಸಂಘಟನೆಯಾಗಿದೆ. ಅಯೋಧ್ಯೆಯಲ್ಲಿ ನನೆಗುದಿಗೆ ಬಿದ್ದಿದ್ದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲೂ, ಪ್ರಮುಖ ಪಾತ್ರ ವಹಿಸಿದೆ.
ಸನಾತನ ಹಿಂದೂ ಧರ್ಮದ ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಸಂಕಲ್ಪ ವಾಗಲಿ’ ಎಂದು ಸಲಹೆ ನೀಡಿದರು.
ಹೊಸನಗರ ತಾಲ್ಲೂಕು ಆರ್ಎಸ್ಎಸ್ ಸಹ ಕಾರ್ಯವಾಹ ಕಾರ್ತಿಕ್ ಎನ್. ಮಾತನಾಡಿದರು.
ಹೊಸನಗರ ತಾಲ್ಲೂಕು ಹಿಂದೂ ಸಂಗಮದ ಅಧ್ಯಕ್ಷ ವಿನಯ್ ಶೆಟ್ಟಿ, ಪಟ್ಟಣದ ಹಿರಿಯ ಕೃಷಿಕ ಅನಂತಕುಮಾರ್ ಜವಳಿ, ಸುಮಾ ಮಾತಾಜೀ, ರಂಜನ್ ಮತ್ತು ಭರತ್, ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.