ADVERTISEMENT

ಜವಾಬ್ದಾರಿ ವಹಿಸಿಕೊಂಡ ಬಳಿಕ ನಿದ್ರೆ ಇಲ್ಲದೆ ರಾತ್ರಿ ಕಳೆಯುತ್ತಿರುವೆ: ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 14:57 IST
Last Updated 16 ಆಗಸ್ಟ್ 2021, 14:57 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಶಿವಮೊಗ್ಗ: ಗೃಹ ಸಚಿವ ಸ್ಥಾನ ಅಲಂಕರಿಸಿದ ಮೇಲೆ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿರುವೆ. ಕೊಟ್ಟ ಕುದುರೆ ಇಳಿದರೆ ಶೂರನಾಗುವುದಿಲ್ಲ ಎನ್ನುವ ಕಾರಣಕ್ಕೆ ನಿಭಾಯಿಸುತ್ತಿರುವೆ ಎಂದು ಆರಗ ಜ್ಞಾನೇಂದ್ರ ಮನದಾಳ ತೋಡಿಕೊಂಡರು.

ಎಪಿಎಂಸಿ ಆವರಣದಲ್ಲಿ ಅಡಿಕೆ ಸಹಕಾರ ಸಂಘಗಳ ಮಹಾಮಂಡಲ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಗೃಹ ಖಾತೆಯ ಕಿರಿಕಿರಿ ನನಗೆ ಮಾತ್ರ ಗೊತ್ತಿದೆ. ಸರಿಯಾಗಿ ನಿದ್ರೆ ಮಾಡಲೂ ಆಗದ ಕಥೆ ನನ್ನದು. ಹಾಗಂತ ಪಲಾಯನ ಮಾಡುವುದಿಲ್ಲ. ಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

ಅಡಿಕೆ ವಿಷಯದಲ್ಲಿ ಸುಪ್ರೀಂಕೋರ್ಟ್‌ ತೂಗುಗತ್ತಿ ಇದೆ. ಅಡಿಕೆಗೆ ರಕ್ಷಾ ಕವಚದ ಅಗತ್ಯವಿದೆ. ಅಡಿಕೆ ಟಾಸ್ಕ್‌ಫೋರ್ಸ್‌ ಸುಪ್ರೀಂಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸುವ ಮೂಲಕ ಬೆಳೆಗಾರರ ಆತಂಕ ದೂರ ಮಾಡುವ ಪ್ರಯತ್ನ ಮಾಡಲಿದೆ. ಅಡಿಕೆ ಗುಣಮಟ್ಟ ಪರಿಶೀಲನೆಗೆ ಮಾನದಂಡ ನಿಗದಿ ಮಾಡಬೇಕಿದೆ. ಶಾಶ್ವತ ಪರಿಹಾರ ಸಾಧ್ಯವಿಲ್ಲದಿದ್ದರೂ, ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಗಳು ನಡೆಯಬೇಕು. ಗೃಹ ಖಾತೆಯ ಜತೆಗೆ ಅಡಿಕೆ ಸಂರಕ್ಷಣೆಗೂ ಆದ್ಯತೆ ನೀಡುವೆ ಎಂದು ಭರವಸೆ ನೀಡಿದರು.

ಪೊಲೀಸ್‌ ಠಾಣೆ, ತಾಲ್ಲೂಕು ಕಚೇರಿಗಳಲ್ಲಿ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಡುತ್ತಲೇ ಬಂದಿರುವೆ. ಇಂದು ಅಂತಹ ಇಲಾಖೆಯ ಮುಖ್ಯಸ್ಥನಾಗುವ ಅವಕಾಶ ಸಿಕ್ಕಿದೆ. ಆರ್‌ಎಸ್‌ಎಸ್‌ ಕಲಿಸಿದ ಪ್ರಮಾಣಿಕತೆ ಜತೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.