ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿಯ 52 ವಾಣಿಜ್ಯ ಮಳಿಗೆಗೆ ನಡೆದ ಹರಾಜು ಪ್ರಕ್ರಿಯೆ ದೋಷದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದೆ.
ಬಿಡ್ದಾರರಿಗಿಂತ ಹಾಲಿ ಬಾಡಿಗೆದಾರರು ಶೇಕಡಾ 5ರಷ್ಟು ತಿಂಗಳ ಹೆಚ್ಚುವರಿ ಬಾಡಿಗೆ ಸಂದಾಯಕ್ಕೆ ಒಪ್ಪಿಗೆ ಸೂಚಿಸುವ ನಿಯಮಾವಳಿ ಅವೈಜ್ಞಾನಿಕವಾಗಿದ್ದು, ಮರು ಹರಾಜು ನಡೆಸಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ.
ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಇ-ಟೆಂಡರ್, ಸೀಲ್ಡ್ ಟೆಂಡರ್ ಕಂ ಬಹಿರಂಗ ಹರಾಜು ಪ್ರಕ್ರಿಯೆ ಈಚೆಗೆ ನಡೆಯಿತು. ಸುತ್ತೋಲೆಯ ಪ್ರಕಾರ 26 ಷರತ್ತುಗಳನ್ನು ಪಟ್ಟಣ ಪಂಚಾಯಿತಿ ಜಾಹೀರಾತು, ಕರಪತ್ರದ ಮೂಲಕ ತಿಳಿಸಿದೆ. ಕೊನೆಯ ಕ್ಷಣದಲ್ಲಿ ಶೇಕಡಾ 5ರ ನಿಯಮಾವಳಿ ತಿಳಿಸಲಾಗಿದೆ. ಹರಾಜು ಪ್ರಕ್ರಿಯೆ ಸಂಪೂರ್ಣ ದೋಷ ಪೂರಿತವಾಗಿದ್ದು, ಭಾರಿ ಅಕ್ರಮ ನಡೆದಿದೆ ಎಂದು ಉಮೇದುವಾರರು, ಸಾರ್ವಜನಿರು ಆರೋಪಿಸಿದ್ದಾರೆ.
ಪಟ್ಟಣ ಪಂಚಾಯಿತಿಯ ಕಾರ್ಪೊರೇಷನ್ ಬ್ಯಾಂಕ್ ಪಕ್ಕದ 16 ಮಳಿಗೆ, ಮುಖ್ಯ ಬಸ್ನಿಲ್ದಾಣದಲ್ಲಿರುವ ನೆಲ ಅಂತಸ್ತಿನ 10, ಮೊದಲ ಅಂತಸ್ತಿನ 5 ಮಳಿಗೆ, ಸೊಪ್ಪುಗುಡ್ಡೆ ಎಲ್ಐಸಿ ಕಚೇರಿ ಮುಂಭಾಗದ 3 ಮಳಿಗೆ, ರಥಬೀದಿಯ ಮೊದಲ ಅಂತಸ್ತಿನ 2 ಮಳಿಗೆ, ಮುಖ್ಯ ಬಸ್ನಿಲ್ದಾಣದ ಪೋಸ್ಟ್ ಆಫೀಸ್ ಮುಂಭಾಗದ 1 ಮಳಿಗೆ ಹಾಗೂ ಮುಖ್ಯ ಬಸ್ನಿಲ್ದಾಣದ ಹೋಟೆಲ್ ಮಳಿಗೆಗಳಿಗೆ 12 ವರ್ಷದ ಅವಧಿಗೆ ಹರಾಜು ಪ್ರಕ್ರಿಯೆ ನಡೆದಿದೆ.
ದೀರ್ಘಾವಧಿ ನಂತರ ಹರಾಜು: 12 ವರ್ಷಗಳ ನಂತರ ಹರಾಜು ಪ್ರಕ್ರಿಯೆ ನಡೆದಿದ್ದು, ಕೊನೆಯ ಕ್ಷಣದಲ್ಲಿ ಮುಖ್ಯಾಧಿಕಾರಿ ಬಿಡ್ದಾರರಿಗಿಂತ ಹೆಚ್ಚುವರಿಯಾಗಿ ಶೇಕಡ 5ರಷ್ಟು ಹಾಲಿ ಬಾಡಿಗೆದಾರರು ನೀಡಿದರೆ ಟೆಂಡರ್ ಅವರದ್ದು ಎಂಬ ಹೇಳಿಕೆ ಉಮೇದುರಾರ ನಿರೀಕ್ಷೆ ಹುಸಿಗೊಳಿಸಿದೆ.
‘ಟೆಂಡರ್ ಪ್ರಕ್ರಿಯೆ ನಿಯಮಾವಳಿ ಪ್ರಕಾರ ನಡೆದಿಲ್ಲ. ಹಾಲಿ ಬಾಡಿಗೆದಾರರಿಗೆ ಅನುಕೂಲ ಮಾಡುವ ನಿಯಮಾವಳಿ ಅನುಸರಿಸಲಾಗಿದೆ. ಶೇಕಡಾ 5ರ ನಿಯಮಾವಳಿ ಮುಂಚಿತವಾಗಿ ಸಾರ್ವಜನಿಕರಿಗೆ ತಿಳಿಸದೆ ತಡೆಹಿಡಿಯಲಾಗಿದೆ. ಯಥಾಸ್ಥಿತಿ ಕಾಪಾಡಿಕೊಂಡು ಮರುಹರಾಜು ನಡೆಸಬೇಕು. ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗುವುದು’ ಎಂದು ಬಿಡ್ಡುದಾರ ಶ್ರೀನಂದ ದಬ್ಬಣಗದ್ದೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.