ADVERTISEMENT

ಹಳ್ಳಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಿಲ್ಲಿಸಿ; ಅರುಣೋದಯ ಮಹಿಳಾ ಒಕ್ಕೂಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:05 IST
Last Updated 19 ಫೆಬ್ರುವರಿ 2026, 3:05 IST
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಅರುಣೋದಯ ಮಹಿಳಾ ಸಂಘದಿಂದ ಪ್ರತಿಭಟನೆ ನಡೆಯಿತು
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಅರುಣೋದಯ ಮಹಿಳಾ ಸಂಘದಿಂದ ಪ್ರತಿಭಟನೆ ನಡೆಯಿತು   

ಶಿವಮೊಗ್ಗ: ‘ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಬೇಕು, ಗ್ರಾಮೀಣ ಭಾಗದಲ್ಲಿ ಹೊಸದಾಗಿ ಬಸ್ ಸಂಚಾರ ಆರಂಭಿಸಬೇಕು’ ಎಂದು ಆಗ್ರಹಿಸಿ ಅರುಣೋದಯ ಮಹಿಳಾ ಒಕ್ಕೂಟದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪರವಾನಗಿ ಇಲ್ಲದ ಸಣ್ಣಪುಟ್ಟ ಅಂಗಡಿ, ಗೂಡಂಗಡಿ ಮತ್ತು ಕೆಲವು ಮನೆಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರ ಪರಿಣಾಮ ಗ್ರಾಮೀಣರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೌಟುಂಬಿಕ ಕಲಹ, ಯುವಜನತೆ ದಾರಿ ತಪ್ಪುತ್ತಿರುವುದು, ಗ್ರಾಮದ ಅಶಾಂತಿ, ಅವಾಚ್ಯ ಪದಗಳಿಂದ ನಿಂದನೆ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಮಕ್ಕಳು ಮತ್ತು ಮಹಿಳೆಯರು ಓಡಾಡುವುದೇ ದುಸ್ತರವಾಗಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. 

‘ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು. 

ADVERTISEMENT

ಒಕ್ಕೂಟದ ಅಧ್ಯಕ್ಷೆ ಗಂಗಾ, ಉಪಾಧ್ಯಕ್ಷೆ ಶಕುಂತಲಾ, ಪ್ರಮುಖರಾದ ವಿಶಾಲಾಕ್ಷಿ, ಶುಭಲಕ್ಷ್ಮೀ, ಕಾಳಿಬಾಯಿ, ಸುಶೀಲಮ್ಮ, ಶಾರದಾ, ಲಕ್ಷ್ಮೀದೇವಿ, ಜ್ಯೋತಿ, ಪವಿತ್ರಾ, ಸಾಜಿದಾ ಇದ್ದರು.

ನಿರಂತರ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

ಗ್ರಾಮೀಣ ಭಾಗಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ರೈತರು ಸರ್ಕಾರಿ ನೌಕರರು ಮತ್ತು ಕೂಲಿ ಕಾರ್ಮಿಕರಿಗೆ ಪಟ್ಟಣಕ್ಕೆ ಬಂದು ಹೋಗಲು ಸರಿಯಾದ ಬಸ್ ಸೌಲಭ್ಯವಿಲ್ಲದೇ ತೊಂದರೆಗೀಡಾಗುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು. ವಿಶೇಷವಾಗಿ ಭದ್ರಾವತಿ- ಕಲ್ಲಿಹಾಳ್ -ಸರ್ಕಲ್- ತಟ್ಟೆಹಳ್ಳಿ- ಕೈಮರ ಸಿದ್ಲಿಪುರ- ಹುಲಿಮಟ್ಟಿ-ಮಂಡ್ಯ ಕ್ಯಾಂಪ್ ಕೈಮರ- ಅರಹತೊಳಲು-ವಡ್ಡರಹಟ್ಟಿ- ಚಂದನಕೆರೆ ಶಿವಮೊಗ್ಗ-ಬಿ.ಬೀರನಹಳ್ಳಿ ಶಿವಮೊಗ್ಗ- ಹೊನ್ನವಿಲೆ ಮಾರ್ಗಗಳಲ್ಲಿ ನಿರಂತರ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.