ಸಾಗರ: ‘ಭಾರತೀಯ ಕಲೆಗಳು ಸಂಸ್ಕಾರದ ಮೂಲ ಆಗಿರುವುದರಿಂದ ಇಂತಹ ಕಲಾ ಪ್ರಕಾರಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹ ನೀಡಬೇಕು’ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಭಾನುವಾರ ನಡೆದ ಪರಿಣಿತಿ ಕಲಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಸಂಗೀತ, ನೃತ್ಯ ಕ್ಷೇತ್ರದಲ್ಲಿ ಹಲವು ವರ್ಷಗಳ ಪರಿಶ್ರಮದ ನಂತರವಷ್ಟೇ ಯಶಸ್ಸು ಲಭಿಸುತ್ತದೆ’ ಎಂದರು.
‘ಶಾಸ್ತ್ರೀಯ ನೃತ್ಯದ ಜೊತೆಗೆ ಜಾನಪದ ಕಲಾ ಪ್ರಕಾರಗಳನ್ನೂ ಬೆಸೆದು ನೃತ್ಯಾಸಕ್ತರಿಗೆ ವಿಶೇಷ ತರಬೇತಿ ನೀಡುತ್ತಿರುವುದು ಪರಿಣಿತಿ ಕಲಾ ಕೇಂದ್ರದ ಹೆಗ್ಗಳಿಕೆಯಾಗಿದೆ. ಹಲವು ಪ್ರಸಿದ್ಧ ಕಲಾವಿದರನ್ನು ಇಲ್ಲಿಗೆ ಕರೆಸುವ ಮೂಲಕ ಅವರ ಸಾಧನೆಯನ್ನು ಪರಿಚಯಿಸಿ, ಸ್ಥಳೀಯ ಕಲಾವಿದರಿಗೆ ಸ್ಫೂರ್ತಿ ದೊರಕುವಂತೆ ಮಾಡುತ್ತಿರುವುದು ಪರಿಣಿತಿ ಕೇಂದ್ರದ ಮತ್ತೊಂದು ಸಾಧನೆಯಾಗಿದೆ’ ಎಂದು ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಹೇಳಿದರು.
ಪರಿಣಿತಿ ಕಲಾ ಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅರುಣ್ ಕುಮಾರ್, ಕೆ.ಆರ್.ಗಣೇಶ್ ಪ್ರಸಾದ್, ಸೋಮಶೇಖರ್, ವಿದ್ವಾನ್ ಎಂ.ಗೋಪಾಲ್, ರಮೇಶ್ ಹೆಗಡೆ ಗುಂಡೂಮನೆ, ಉದಯಕುಮಾರ್ ಕುಂಸಿ, ಶ್ವೇತಾ ಗೋಪಾಲ್, ಎಸ್.ಆರ್.ರಕ್ಷಿತ್, ಪ್ರಭಾಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.