ADVERTISEMENT

ಬಿಜೆಪಿ ಜತೆ ಮೈತ್ರಿಗೆ ಕುಮಾರಸ್ವಾಮಿ ಒಲವು: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 18:27 IST
Last Updated 23 ಫೆಬ್ರುವರಿ 2019, 18:27 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ಕಾಂಗ್ರೆಸ್‌ ವರ್ತನೆಯಿಂದ ಬೇಸರಗೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಡುವೆ ಮನಸ್ತಾಪಉಂಟಾಗಿದೆ. ಇದರಿಂದ ಬೇಸರಗೊಂಡುಕುಮಾರಸ್ವಾಮಿಯವರೇ ನನ್ನ ಹತ್ತಿರ ಮಾತನಾಡಿದ್ದಾರೆ.

ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಬಿಜೆಪಿ ಜತೆ ಕೈಜೋಡಿಸುವ ಸೂಚನೆ ನೀಡಿದ್ದಾರೆ. ಆದರೆ, ಮಾಧ್ಯಮದವರು ಈ ಬಗ್ಗೆ ಕೇಳಿದರೆ ಕುಮಾರಸ್ವಾಮಿ ಅದೆಲ್ಲಾಸುಳ್ಳು ಎಂದು ಹೇಳುತ್ತಾರೆ. ಅದೇನೇ ಇರಲಿ ಮನಸಾಕ್ಷಿ ಎನ್ನುವುದು ಇರುತ್ತದೆಯಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

ಸ್ವಲ್ಪದಿನ ಕಾದು ನೋಡಿ:ವಿರೋಧಪಕ್ಷಗಳು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಹೇಳುತ್ತವೆ. ಆದರೆ, ನಮ್ಮದು ರಾಷ್ಟ್ರವಾದಿ ಪಕ್ಷ. ಕಾಂಗ್ರೆಸ್, ಜೆಡಿಎಸ್ ಅವಕಾಶವಾದಿ ಪಕ್ಷಗಳಾಗಿವೆ.ಪ್ರಧಾನಿ ಮೋದಿ ದೇಶಭಕ್ತ ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಭೂಪಟದಲ್ಲಿ ಇರುತ್ತದೆಯೋ, ಇಲ್ಲವೋ ಎಂಬುದನ್ನು ಸ್ವಲ್ಪ ದಿನ ಕಾದು ನೋಡಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಚಪ್ಪಲಿ ತೋರಿದ್ದಕ್ಕೆ ಸಮರ್ಥನೆ:ಶಿವಮೊಗ್ಗದಲ್ಲಿ ಕರ್ತವ್ಯನಿರತ ಆರ್‌ಟಿಒ ಅಧಿಕಾರಿಗೆ ಬಿಜೆಪಿಯಪಾಲಿಕೆ ಸದಸ್ಯರೊಬ್ಬರು ಚಪ್ಪಲಿ ತೋರಿಸಿದ ಪ್ರಕರಣವನ್ನು ಈಶ್ವರಪ್ಪ ಸಮರ್ಥಿಸಿಕೊಂಡರು.

ಅಧಿಕಾರಿಗೆ ಚಪ್ಪಲಿ ತೋರಿಸಿದ್ದು ಸರಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಆಕ್ರೋಶದಿಂದಲೇ ಉತ್ತರಿಸಿದ ಈಶ್ವರಪ್ಪ, ‘ನಮ್ಮ ಪಕ್ಷದ ಪಾಲಿಕೆ ಸದಸ್ಯರು ಅಧಿಕಾರಿಗೆ ಚಪ್ಪಲಿ ತೋರಿಸಿರುವುದಕ್ಕೆ ಕಾರಣವಿದೆ. ಘಟನೆಯ ಹಿಂದಿನ ದಿನ ಆರ್‌ಟಿಒ ಅಧಿಕಾರಿಯು ಕಚೇರಿ ಒಳಗೆ ಬಂದ ವ್ಯಕ್ತಿಯೊಬ್ಬರಿಗೆ ನಿನಗೆ ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳಿದ್ದಾರೆ ಎಂದರು.

ಅದನ್ನು ಪ್ರಶ್ನಿಸಿದ ಸದಸ್ಯ, ‘ಹೇಗೆ ಚಪ್ಪಲಿಯಿಂದ ಹೊಡೆಯುತ್ತೀರಿ’ ಎಂದು ಪಾದರಕ್ಷೆ ಕಳಚಿದ್ದಾರೆ ಅಷ್ಟೆ. ಇದನ್ನು ತಿರುಚಲಾಗಿದೆ. ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೇನೆ’ ಎಂದು ಹೇಳಿದರು.

‘ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಹೊಂದಾಣಿಕೆಯಾಗಲ್ಲ’

ವಿಜಯಪುರ: ‘ರಾಜ್ಯದಲ್ಲಿ, ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್–ಜೆಡಿಎಸ್‌ ಮುಖಂಡರ ನಡುವೆ ಹೊಂದಾಣಿಕೆಯಾಗಬಹುದು. ಆದರೆ, ಆ ಪಕ್ಷಗಳ ಕಾರ್ಯಕರ್ತರ ನಡುವೆ ಎಂದೂ ದೋಸ್ತಿ ಏರ್ಪಡಲ್ಲ’ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪಹೇಳಿದರು.

‘ಹೊಂದಾಣಿಕೆ ಯಾರ ಜತೆಗೆ, ಏತಕ್ಕಾಗಿ ಎಂಬುದನ್ನು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು’ ಎಂದು ಶನಿವಾರ ಇಲ್ಲಿ ನಡೆದ ‘ಮೋದಿ ವಿಜಯ ಸಂಕಲ್ಪ ಯಾತ್ರೆ’ಯಲ್ಲಿ
ಒತ್ತಾಯಿಸಿದರು.

‘17 ಸಂಸದರಿಗೂ ಟಿಕೆಟ್‌ ಸಾಧ್ಯತೆ’

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ರಾಜ್ಯದಲ್ಲಿ ಈಗಿರುವ 17 ಮಂದಿ ಸಂಸದರಿಗೂ ಮುಂದಿನಚುನಾವಣೆಯಲ್ಲಿ ಟಿಕೆಟ್ ಸಿಗುವ ಸಂಭವವಿದೆ. ಕೊನೆಗಳಿಗೆಯಲ್ಲಿ ಬದಲಾವಣೆ ಇದ್ದರೆ ಕೇಂದ್ರದ ನಾಯಕರು ತೀರ್ಮಾನಿಸಲಿದ್ದಾರೆ’ ಎಂದುಹೇಳಿದರು.

‘ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ’ ಎಂಬ ಪ್ರಶ್ನೆಗೆ, ‘ಯಾರೋ ಒಬ್ಬರು ಏನೇನೋ ಹೇಳಬಹುದು’ ಎಂದಷ್ಟೇ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.