ಶಿಕಾರಿಪುರ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಏ.19ರಂದು ರಾಷ್ಟ್ರ ಬಳಗದ ನಾಯಕ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ರಾಷ್ಟ್ರಭಕ್ತ ಬಳಗದ ಸದಸ್ಯ ರಾಗಿಕೊಪ್ಪ ಗಂಗ್ಯಾನಾಯ್ಕ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಲಿದ್ದಾರೆ. ನಂತರ ಸಾಲೂರು ಸೇವಲಾಲ್ ಹಾಗೂ ಮರಿಯಮ್ಮ ದೇವಿ ಮಠದ ಪೀಠಾಧ್ಯಕ್ಷ ಸೈನಾಭಗತ್ ಸ್ವಾಮೀಜಿ ಆಶೀರ್ವಾದ ಪಡೆದು ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದರು.
ಅಂಜನಾಪುರ ಹೋಬಳಿ ಪ್ರಚಾರ ಸಭೆಯನ್ನು ಸಾಲೂರು ಜಂಕ್ಷನ್ ನಲ್ಲಿ ಹಾಗೂ ಹೊಸೂರು ಹೋಬಳಿ ಪ್ರಚಾರ ಸಭೆಯನ್ನು ಹೊಸೂರು ಜಂಕ್ಷನ್ ನಲ್ಲಿ ಆಯೋಜಿಸಲಾಗಿದೆ. ತಾಲ್ಲೂಕಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಪಿ. ನಾಗರಾಜಗೌಡರ ಕೊಡುಗೆ ಏನು ಇರಲಿಲ್ಲ. ಆದರೆ ಯಡಿಯೂರಪ್ಪ ಕುಟುಂಬ ಮಕ್ಕಳನ್ನು ಸೋಲಿಸಲು 71,000 ಮತವನ್ನು ಎಸ್.ಪಿ. ನಾಗರಾಜಗೌಡ ಅವರಿಗೆ ನೀಡಿದ್ದರು. ಈ ಲೋಕಸಭೆ ಚುನಾವಣೆಯಲ್ಲಿ ಕೆ.ಎಸ್. ಈಶ್ಚರಪ್ಪ ಅವರಿಗೆ 1 ಲಕ್ಷ ಮತ ಕೊಡಿಸಲು ಶ್ರಮ ಹಾಕುತ್ತೇವೆ ಎಂದರು.
ರಾಷ್ಟ್ರಭಕ್ತ ಬಳಗದ ಸದಸ್ಯರಾದ ಗಂಗಾಧರ್, ಶಿವಮೊಗ್ಗ ಮುರುಘೇಶ್, ಮಂಜ್ಯಾನಾಯ್ಕ ಗೊಗ್ಗ, ಕುಮಾರ ನಾಯ್ಕ ಗೊದ್ದನಕೊಪ್ಪ, ಶಿವ್ಯಾನಾಯ್ಕ, ಪುಟ್ಟಪ್ಪ ತಿಮ್ಲಾಪುರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.