
ಶಿವಮೊಗ್ಗ: ಮೌಲ್ಯ ಇಲ್ಲ ಎಂಬ ಕಾಲದಲ್ಲಿ ಇಲ್ಲಿ ಸತ್ವ ಇದೆ ಎಂಬುದನ್ನು ಸಾಬೀತು ಪಡಿಸುವ ರೀತಿಯಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ಇದೆ ಎಂದು ಹಿರಿಯ ಚಿತ್ರನಟ ಶ್ರೀಧರ್ ಬಣ್ಣಿಸಿದರು.
ಕರ್ನಾಟಕ ಸಂಘದಲ್ಲಿ ಭಾನುವಾರ ಹಿರಿಯ ಸದಸ್ಯರಿಗೆ ಆಯೋಜಿಸಿದ್ದ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸತ್ವಯುತವಾದ ವ್ಯಕ್ತಿ ಇದ್ದ ಜಾಗದಲ್ಲಿ ಧನಾತ್ಮಕ ಕಂಪನ, ಚೈತನ್ಯ ಇರುತ್ತದೆ. ಕುವೆಂಪು, ದ.ರಾ.ಬೇಂದ್ರ ಅವರಂತಹವರು ಕರ್ನಾಟಕ ಸಂಘಕ್ಕೆ ಬಂದಿದ್ದರು. ಅವರ ಜ್ಯೋತಿ ಈ ಜಾಗದಲ್ಲಿ ನಿಂತಿದೆ. ಅದು ಈಗ ಬೆಳಗುತ್ತಿದೆ ಎಂದರು.
ಬೆಂಗಳೂರಿನಲ್ಲಿರುವ ಸಾಹಿತ್ಯಾಸಕ್ತರಿಗೆ ಕರ್ನಾಟಕ ಸಂಘವೆಂದರೆ ವಿಶೇಷ ಪ್ರೀತಿ ಇದೆ. ಕೆಲವು ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಹೋಗಬೇಕಾ ಎಂದೆನಿಸುತ್ತೆ. ಆದರೆ ಕರ್ನಾಟಕ ಸಂಘ ಹಾಗಲ್ಲ. ಇಲ್ಲಿಗೆ ಬರುವುದೇ ಸಂತೋಷ ಎಂದರು.
ಭಾರತೀಯ ಸಾಹಿತ್ಯದಲ್ಲಿ ಮುಖ್ಯ ಶಬ್ದ 'ರಸ'. ಅದು ಅಂತಿಮವಾಗಿ ಪರಮಾತ್ಮವಾಗಿದೆ. ಭರತನಾಟ್ಯಶಾಸ್ತ್ರ ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆದವು. ಆ ಸಮಯದಲ್ಲಿ ಯೋಗಿಗಳಾಗುತ್ತವೆ. ರಸ ಸಂಪರ್ಕ, ಸಂವೇದನೆಯಿಂದ ಯೋಗಿಗಳಾಗುತ್ತೇವೆ ಎಂದರು.
ವರಕವಿ ದ.ರಾ. ಬೇಂದ್ರ ತತ್ವ ಋಷಿ. ಅವರು ಮಾತಾಡಿದರೆ ವಿಶೇಷವಾಗಿತ್ತು. ಬೇಂದ್ರೆ ಅವರನ್ನು ಜಗತ್ತು ನೋಡಿದ್ದು ಶಿವಮೊಗ್ಗ ಕರ್ನಾಟಕ ಸಂಘದಿಂದ ಎಂದು ಅವರೇ ಹೇಳಿದ್ದಾರೆ. ಅದಕ್ಕಿಂತ ದೊಡ್ಡ ಪುರಾವೆ ಬೇಕೆ? ಸಂಘದ ಇತಿಹಾಸದಲ್ಲಿ ಅನೇಕ ಮಹನೀಯರು ಕೊಡುಗೆಗಳನ್ನು ನೀಡಿದ್ದಾರೆ. ಇಲ್ಲಿಗೆ ಬಂದು ಕನ್ನಡದ ದೇವಾಲಯಕ್ಕೆ ಬಂದಂತಾಯ್ತು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಹಿರಿಯ ಸದಸ್ಯರಾದ ಎ.ಜೆ.ರಾಮಚಂದ್ರ, ಎಸ್.ನಾಗರಾಜ್, ಎ.ಎಸ್.ಕೃಷ್ಣಮೂರ್ತಿ, ಎಚ್.ಜಿ.ನಾಗರಾಜ್, ಎಚ್.ಎನ್.ಶ್ರೀನಿವಾಸಮೂರ್ತಿ, ಸ.ಉಷಾ ಹಾಗೂ ಅರುಣ್ ಅವರನ್ನು ಶ್ರೀಧರ್ ಅಭಿನಂದಿಸಿ ಗೌರವಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಎಚ್.ಆರ್. ಶಂಕರನಾರಾಯಣ ಶಾಸ್ತ್ರಿ, ಕಾರ್ಯದರ್ಶಿ ವಿನಯ್ ಶಿವಮೊಗ್ಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.