ಕಾರ್ಗಲ್: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾಮಾಜಿಕ ನ್ಯಾಯದ ಪ್ರತಿರೂಪವಾಗಿದ್ದು, ನಾಗರಿಕ ಸಮಾಜ ಅವುಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಕೆಪಿಸಿ ಸಿಬ್ಬಂದಿ ಅಧಿಕಾರಿ ಎಚ್.ವಿ. ಪೂರ್ಣಿಮಾ ಅಭಿಪ್ರಾಯಪಟ್ಟರು.
ಇಲ್ಲಿನ ಕೆಪಿಸಿ ಕ್ಲಬ್ ಆವರಣದ ಒಳಾಂಗಣದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಸಂಘದ ಸಹಯೋಗದಲ್ಲಿ 133 ನೇ ಜಯಂತಿ ಆಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಸಮಸಮಾಜ ನಿರ್ಮಾಣವೇ ಅಂಬೇಡ್ಕರ್ ಅವರ ಗುರಿಯಾಗಿತ್ತು. ಆ ನಿಟ್ಟಿನಲ್ಲಿ ತಮ್ಮೆಲ್ಲ ಜ್ಞಾನವನ್ನು ಉಪಯೋಗಿಸಿಕೊಂಡು ಅವರು ಸಂವಿಧಾನ ರೂಪಿಸಿ, ಸಾಮಾಜಿಕ ನ್ಯಾಯವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಶ್ರಮಿಸಿದರು. ಈ ದಿಸೆಯಲ್ಲಿ ಅವರು ಅನೇಕ ಏಳು ಬೀಳುಗಳನ್ನು ತಮ್ಮ ವೈಯುಕ್ತಿಕ ಜೀವನದಲ್ಲಿ ಅನುಭವಿಸಿದರೂ, ಯಾವುದೇ ಹಂತದಲ್ಲಿ ಎದೆಗುಂದಲಿಲ್ಲ. ಯುವ ಪೀಳಿಗೆ ಅಂಬೇಡ್ಕರ್ ಜೀವನ ಚರಿತ್ರೆ ಓದಿ ಪಠಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಉಳ್ಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಕೆ. ರಾಜೇಶ ಉಪನ್ಯಾಸಕ ನೀಡಿದರು. ಸಭೆಯಲ್ಲಿ ಕೆಪಿಸಿ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ಜಿ.ಇ. ಮೋಹನ್, ವಿದ್ಯುತ್ ವಿಭಾಗದ ಎನ್. ಉದಯನಾಯಕ್, ಅಧೀಕ್ಷಕ ಎಂಜಿನಿಯರ್ ಡಿ.ಕೆ. ವಾಸುದೇವಮೂರ್ತಿ, ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ಶಿವಕುಮಾರ್, ಕೆಪಿಸಿ ಪರಿಶಿಷ್ಟ ಜಾತಿ ವರ್ಗದ ಕಾರ್ಮಿಕ ಸಂಘಟನೆಯ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮಿರ್ಜಾಕುಮಾರ್ ಉಪಸ್ಥಿತರಿದ್ದರು.
ಕಬಾಳಯ್ಯ ಸ್ವಾಗತಿಸಿದರು. ಗೀತಾ ಗೊರವನಹಳ್ಳಿ ಮತ್ತು ಎಸ್. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಪಿ. ಸುರೇಶ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.