ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದ ರಾಜಾ ಫಾಲ್ಸ್ ನೆತ್ತಿಯ ಪ್ರದೇಶದ ತುಸು ಸನಿಹದಲ್ಲಿ ನಿಪ್ಳಿ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಬೆಟ್ಟ ಗುಡ್ಡ, ಹೊಲ– ಗದ್ದೆಗಳಿಂದ ನೀರು ಹರಿದು ಹೊಸೂರು ಮಿನಿ ಅಣೆಕಟ್ಟೆಯ ಮೇಲಿನಿಂದ ಕೋಡಿ ಬಿದ್ದು, ವರದಾ ನದಿಯತ್ತ ಮುನ್ನುಗ್ಗುವ ವೇಳೆ ಸೃಷ್ಟಿಯಾಗುವ ಪ್ರಕೃತಿಯ ರಮಣೀಯ ತಾಣ ನಿಪ್ಳಿ ಜಲಪಾತ ಎಂದು ಹೆಸರು ಪಡೆದಿದೆ.
ಭೂಮಿಯ ಮೇಲ್ಮೈನಲ್ಲಿರುವ ಕಲ್ಲು ಮಣ್ಣುಗಳು, ಬೃಹತ್ ಗಾತ್ರದ ಜಂಬಿಟ್ಟಿಗೆ ಪದರುಗಳು ನೀರಿನಲ್ಲಿ ಹರಿದು ಹೋಗಲು ಸಹಾಯ ಮಾಡುತ್ತಿರುವ ವಿಸ್ಮಯಕಾರಿ ದೃಶ್ಯವನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಹರಿಯುತ್ತಿರುವ ನೀರಿನಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಗೆ ಯಾವುದೇ ಅಪಾಯವಿಲ್ಲದೇ ಪ್ರವಾಸಿಗರು ನಡೆದುಕೊಂಡು ಹೋಗಬಹುದು.
ಜೋಗದ ಮುಂಬಯಿ ಬಂಗಲೆಯಿಂದ 10 ಕಿ.ಮೀ. ದೂರದಲ್ಲಿರುವ ನಿಪ್ಳಿ ಜಲಪಾತವು ಮಾವಿನಗುಂಡಿ– ಸಿದ್ದಾಪುರ, ಜೋಗ – ತಾಳಗುಪ್ಪ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಿಂದ 3 ಕಿ.ಮೀ ಒಳಾಂತರದಲ್ಲಿ ನೆಲೆಗೊಂಡಿದೆ. ಸಿದ್ದಾಪುರ ತಾಲ್ಲೂಕಿನ ಹಲಗೇರಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೇರಿರುವ ಇಲ್ಲಿನ ಪ್ರದೇಶದಲ್ಲಿ ಪ್ರವಾಸಿಗರಿಂದ ಪಾರ್ಕಿಂಗ್ ಶುಲ್ಕವನ್ನು ಪಡೆಯುವ ಮೂಲಕ, ಪರಿಸರ ನೈರ್ಮಲ್ಯವನ್ನು ಕಾಪಾಡುವ ಮತ್ತು ಮೂಲ ಸೌಕರ್ಯಗಳಾದ ಶೌಚಾಲಯ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸುವ ಕೆಲಸಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದೆ.
‘ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರು ಇಲ್ಲಿಗೆ ದೌಡಾಯಿಸುತ್ತಿದ್ದಾರೆ. ಯುವಕರು, ಯುವತಿಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನೀರಿಗಿಳಿದು ಆಟ ಆಡುವುದು ಮತ್ತು ಸ್ನಾನ ಮಾಡುವುದು ಇಲ್ಲಿ ಸಹಜವಾಗಿ ಕಂಡು ಬರುತ್ತದೆ. ಇಂತಹ ಪ್ರದೇಶದಲ್ಲಿ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಗೆ ಸ್ಥಳೀಯ ಆಡಳಿತ ಹೆಚ್ಚಿನ ಒತ್ತು ನೀಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ಜಿ. ನಾಯ್ಕ ಒತ್ತಾಯಿಸಿದ್ದಾರೆ.
‘ಪ್ರಕೃತಿಯ ಸುಂದರ ತಾಣಗಳ ವಿಸ್ಮಯವನ್ನು ಪ್ರವಾಸಿಗರು ವೀಕ್ಷಿಸಿ, ಮನಸಾರೆ ತಣಿಯಲು ನಿಪ್ಳಿ ಫಾಲ್ಸ್ ಪರಿಸರ ಸೂಕ್ತವಾಗಿದ್ದು, ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕಿದೆ’ ಎಂದು ಜಲಪಾತ ವೀಕ್ಷಣೆಗೆ ಬಂದಿದ್ದ ಅನಿವಾಸಿ ಭಾರತೀಯ ಪ್ರವಾಸಿ ನಾಗ ನಾಯನ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.