ADVERTISEMENT

ಕೊಲೆ ತನಿಖೆಯಲ್ಲಿ ತಾರತಮ್ಯವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ

‘ಪ್ರವೀಣ್, ಫಾಝಿಲ್ ಕೊಲೆ ಪ್ರಕರಣ: ಗೃಹ ಸಚಿವರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:27 IST
Last Updated 31 ಜುಲೈ 2022, 5:27 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಶಿವಮೊಗ್ಗ: ‘ಪ್ರವೀಣ್ನೆಟ್ಟಾರು ಹಾಗೂ ಸುರತ್ಕಲ್‌ನ ಮಹಮ್ಮದ್‌ ಫಾಝಿಲ್ ಕೊಲೆ ತನಿಖೆ ವಿಚಾರದಲ್ಲಿ ವಿರೋಧ ಪಕ್ಷಗಳು ಆರೋಪಿಸುವಂತೆ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

‘ಪ್ರವೀಣ್ ಕೊಲೆ ಪ್ರಕರಣದಲ್ಲಿ ಈಗಿರುವ ಮಾಹಿತಿ ಪ್ರಕಾರ ಆರೋಪಿಗಳಿಗೆ ಎರಡು ರಾಜ್ಯಗಳ (ಕರ್ನಾಟಕ, ಕೇರಳ) ನಂಟು ಇದೆ. ಹೀಗಾಗಿ ತನಿಖೆಯ ಹೊಣೆ ಎನ್‌ಐಎಗೆ ಒಪ್ಪಿಸಿದ್ದೇವೆ. ಫಾಝಿಲ್ ಕೊಲೆ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಪ್ರಕರಣದ ಹಿನ್ನೆಲೆ ಅರಿಯದೇ ಎನ್‌ಐಎಗೆ ಕೊಡಲು ಆಗುವುದಿಲ್ಲ’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಆರಗ, ‘ಸಾವಿಗೆ ಸಾವು ಪರಿಹಾರ ಎಂಬುದು ನಮ್ಮ ನಂಬಿಕೆ ಅಲ್ಲ. ಯಾವುದೇ ವ್ಯಕ್ತಿ ಸತ್ತಾಗ ಮಾನಸಿಕವಾಗಿ ಹಾಗೆ ಅನಿಸುತ್ತದೆ. ಪ್ರಾಣ ತೆಗೆಯುವುದು ಹುಡುಗಾಟಿಕೆಯ ಮಾತಲ್ಲ. ಅದನ್ನು ನಾವು ನಿಲ್ಲಿಸುತ್ತೇವೆ’ ಎಂದರು.

‘ಮತಾಂಧ ಶಕ್ತಿಗಳಿಂದ ನಡೆದ ಕೊಲೆ ಪ್ರಕರಣಗಳತ್ವರಿತ ವಿಚಾರಣೆಗೆ ನೆರವಾಗಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುತ್ತಿದ್ದೇವೆ. ಆದ್ಯತೆಯ ಮೇರೆಗೆ ಪ್ರಕರಣಗಳನ್ನು ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು. ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ’ ಎಂದು ಹೇಳಿದರು.

‘ಮಂಗಳೂರು ಈಗ ಶಾಂತವಾಗಿದೆ. ಯಾರೂ ಅಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲಎಂದುಪ್ರಶ್ನೆಯೊಂದಕ್ಕೆಉತ್ತರಿಸಿದರು.

ಕಾಂಗ್ರೆಸ್‌ನ ಪಾಪ ಅನುಭವಿಸುತ್ತಿದ್ದೇವೆ:‘ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ಐದು ವರ್ಷಗಳಲ್ಲಿ ರಾಜ್ಯದಲ್ಲಿ
ಮತೀಯ ಸಂಘಟನೆಗಳ ವಿರುದ್ಧದ ಎರಡು ಸಾವಿರ ಪ್ರಕರಣಗಳನ್ನುಹಿಂದಕ್ಕೆ ಪಡೆದಿದ್ದಾರೆ. ಆ ಶಕ್ತಿಗಳನ್ನು ಮತಬ್ಯಾಂಕ್ ಆಗಿ ಬಳಸಿಕೊಂಡು ಬೆನ್ನು ತಟ್ಟಿ ಬೆಳೆಸಿದ್ದಾರೆ.ಆಗ ಮಾಡಿದ ಪಾಪವನ್ನು ಈಗಇಡೀ ರಾಜ್ಯ ಅನುಭವಿಸುತ್ತಿದೆ. ಈಗ ಅವರು (ಸಿದ್ದರಾಮಯ್ಯ) ನಮಗೆ ನಾಲಾಯಕ್ ಅನ್ನುತ್ತಾರೆ. ಏನು ನೈತಿಕತೆ ಇದೆ ಅವರಿಗೆ? ಅವರ ಸರ್ಟಿಫಿಕೇಟ್ ಬೇಕಾ ನಮಗೆ’ ಎಂದು ಕಿಡಿಕಾರಿದರು.

‘ಮುಸ್ಲಿಮರ ಮನೆಗೆ ಹೋಗಬಾರದು ಎಂಬ ಉದ್ದೇಶವಿಲ್ಲ’

‘ಹೆಚ್ಚಿನ ಪ್ರಮಾಣದಲ್ಲಿ ಗುಂಪು ನೆರೆದಿದ್ದರಿಂದ ಹಾಗೂ ಸಮಯದ ಅಭಾವದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಬೆಳ್ಳಾರೆ ಸಮೀಪದ ಕಳಂಜ ಗ್ರಾಮದ ಮಸೂದ್ ಅವರ ಮನೆಗೆ ಭೇಟಿ ನೀಡಿರಲಿಲ್ಲ. ಮುಸ್ಲಿಮರ ಮನೆಗೆ ಭೇಟಿ ನೀಡಬಾರದು ಎಂಬ ದುರುದ್ದೇಶ ಇರಲಿಲ್ಲ. ಇನ್ನೊಂದು ದಿನ ಅವರ ಮನೆಗೂ ಭೇಟಿ ನೀಡುತ್ತೇವೆ’ ಎಂದು ಆರಗ ಜ್ಞಾನೇಂದ್ರ ಶನಿವಾರ ಇಲ್ಲಿ ಸ್ಪಷ್ಟನೆ ನೀಡಿದರು.

*****

ಎಬಿವಿಪಿಯವರು ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಾಕ್ಷಣ ಅವರು ಸಿದ್ದರಾಮಯ್ಯನ ಪಕ್ಷಕ್ಕೆ ಹೋಗುತ್ತಾರೆ ಎಂದರ್ಥವಲ್ಲ. ಅವರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.

–ಆರಗ ಜ್ಞಾನೇಂದ್ರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.