ADVERTISEMENT

ಜೋಗದ ಸಮಗ್ರ ಅಭಿವೃದ್ಧಿ ಬಿಎಸ್‌ವೈ ಕನಸು: ಬಿ.ವೈ.ರಾಘವೇಂದ್ರ

ಕೂಲಿಂಗ್‌ ಗ್ಲಾಸ್‌ ಹಾಕಿ ಈಗ ಫೋಸು ಕೊಡುವುದು ಬೇಡ: ಬೇಳೂರುಗೆ ಟಾಂಗ್

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:43 IST
Last Updated 16 ಮೇ 2025, 14:43 IST
<div class="paragraphs"><p>ಬಿ.ವೈ.ರಾಘವೇಂದ್ರ</p></div>

ಬಿ.ವೈ.ರಾಘವೇಂದ್ರ

   

ಶಿವಮೊಗ್ಗ: ‘ಜೋಗ ಜಲಪಾತದ ಅಭಿವೃದ್ಧಿ ಕಾರ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕನಸು. ಮುಖ್ಯಮಂತ್ರಿ ಆಗಿದ್ದಾಗ ಅವರು ಪ್ರವಾಸೋದ್ಯಮದ ಉತ್ತೇಜನಕ್ಕೆ ಜೋಗ ಪರಿಸರದ ಅಭಿವೃದ್ಧಿಗೆಂದು ₹160 ಕೋಟಿ ಯೋಜನೆ ರೂಪಿಸಿ ಆಗಲೇ ₹80 ಕೋಟಿ ಬಿಡುಗಡೆ ಮಾಡಿದ್ದರು’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸರ್ಕಾರದ ನಾಯಕರು ಈಗ ಅಲ್ಲಿಗೆ ಹೋಗಿ ಹಣ ತಾವೇ ತಂದಿರುವುದಾಗಿ ಕೂಲಿಂಗ್ ಗ್ಲಾಸ್‌ ಹಾಕಿಕೊಂಡು ಫೋಸ್‌ ಕೊಡುವುದು ಬೇಡ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಟಾಂಗ್ ನೀಡಿದರು.

ADVERTISEMENT

‘ಪ್ರವಾಸೋದ್ಯಮ ಅಭಿವೃದ್ಧಿಗೆ ಸಿದ್ಧರಾಮಯ್ಯ ಸರ್ಕಾರ ಬಜೆಟ್‌ನಲ್ಲಿ ₹50 ಕೋಟಿ ಮಾತ್ರ ಮೀಸಲಿಟ್ಟಿದೆ. ಈಗ ಜೋಗದಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಅಭಿವೃದ್ಧಿಗೆ ಸ್ವಲ್ಪ ಸ್ವಲ್ಪ ಹಣ ಕೊಡುತ್ತಿದ್ದಾರೆ. ಅಂದ ಮಾತ್ರಕ್ಕೆ ಎಲ್ಲವನ್ನೂ ಈಗಿನ ಸರ್ಕಾರವೇ ಮಾಡಿದೆ ಎಂಬುದಲ್ಲ. ಜೋಗ ಜಲಪಾತದ ಸುತ್ತಲಿನ 10 ಕಿ.ಮೀ. ವ್ಯಾಪ್ತಿ ಬಫರ್ ಜೋನ್‌ಗೆ ಬರುತ್ತದೆ. ಅದರಿಂದ ಅಭಿವೃದ್ಧಿಗೆ ಹಿನ್ನಡೆ ಆಗಿತ್ತು. ಕೇಂದ್ರ ಸರ್ಕಾರದ ಜೊತೆಗೆ ಹಲವು ಬಾರಿ ಚರ್ಚಿಸಿ, ಅದನ್ನು 1 ಕಿ.ಮೀ. ವ್ಯಾಪ್ತಿಗೆ ಇಳಿಸಿದ್ದರಿಂದ ಈಗ ಅಭಿವೃದ್ಧಿ ಕಾರ್ಯಗಳು ಮುಂದುವರಿದಿವೆ. ಇದರಿಂದ ಪ್ರವಾಸೋದ್ಯಮಕ್ಕೆ ಲಾಭವಾಗಲಿದೆ. ಜೋಗ ಅಭಿವೃದ್ಧಿ ಮತ್ತು ಸಿಗಂದೂರು ಸೇತುವೆ ಎರಡೂ ಕೂಡ ಬಿ.ಎಸ್.ಯಡಿಯೂರಪ್ಪ ಅವರ ಕನಸು ಹಾಗೂ ಕೇಂದ್ರ ಸರ್ಕಾರದ ಸಹಯೋಗ’ ಎಂದರು.

‘ಭದ್ರಾವತಿ– ಚಿಕ್ಕಜಾಜೂರು ನಡುವಿನ ರೈಲ್ವೆ ಮಾರ್ಗದ ಸಮೀಕ್ಷೆಗೆ ಈಗಾಗಲೇ ₹1.80 ಕೋಟಿ ಬಿಡುಗಡೆ ಆಗಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕೂಡ ಇದಕ್ಕೆ ಹೆಚ್ಚಿನ ಶ್ರಮ ಹಾಕಿದ್ದಾರೆ’ ಎಂದರು.

ಸಂತ್ರಸ್ತರ ವಿಚಾರ, ರಾಜಕಾರಣ ಸಲ್ಲ:  ‘ಶರಾವತಿ ಸಂತ್ರಸ್ತರ ವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ. ಹಿಂದೆ ಶಾಸಕ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಹಾಗೂ ಅಡಿಕೆ ಬೆಳೆಗಾರರ ನಿಯೋಗವನ್ನು ಪಕ್ಷಾತೀತವಾಗಿ ದೆಹಲಿಗೆ ಕರೆದುಕೊಂಡು ಹೋಗಿ, ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಮಾಡಲಾಗಿತ್ತು. ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ಕೂಡ ನಡೆದ ಪರಿಣಾಮ ಕೇಂದ್ರದ ಸಾಲಿಟರಿ ಜನರಲ್ ಕೂಡ ಸ್ಪಂದಿಸಿದ್ದರು. ರೈತರ ಬಗ್ಗೆ ಸುಪ್ರಿಂಕೋರ್ಟ್ ಕೂಡ ಒಲವು ತೋರಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.