ಹೊಸನಗರ: ತಾಲ್ಲೂಕಿನ ನಗರ ಚಿಕ್ಕಪೇಟೆ ಗೆಳೆಯರ ಬಳಗದಿಂದ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಿಗ್ಗೆ ಚಿಕ್ಕಪೇಟೆ ಸರ್ಕಲ್ನಲ್ಲಿ ಊರಿನ ಹಿರಿಯರಾದ ವೆಂಕಪ್ಪ ಪೂಜಾರಿ, ಹಾಜಿ ಸಾಬ್, ಪಿಲಿಪ್ ರೋಡ್ರಿಗಸ್ ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ಸಾಧಕರಿಗೆ ಸನ್ಮಾನ: ಗೆಳೆಯರ ಬಳಗದಿಂದ ಹಿರಿಯ ನಾಗರಿಕ ಕುಮಾರ್ ಭಟ್, ಆಟೊ ನಾಗರಾಜ್, ನಿವೃತ್ತ ಯೋಧ ರತ್ನಾಕರ ಗೌಡ, ಸಾಹಿತಿ ಎಡ್ವರ್ಡ್ ಡಿಸೋಜ, ಮಹಿಳಾ ನ್ಯಾಯವಾದಿ ಎಚ್.ಎಲ್.ಕಾವ್ಯಾ, ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸುಷ್ಮಿತಾ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಟಾಪರ್ ಶರೀಫ್ ಮಹಮ್ಮದ್, ಕರಾಟೆ ಪಟು ಸುಧನ್ವ ಜೆ. ಗೌಡ, ವಿದ್ಯಾರ್ಥಿ ಯೋಗಪಟು ಪ್ರತೀಕ್ ಮತ್ತು ರವಿ ಬಿದನೂರು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಮನ ಸೆಳೆದ ನೃತ್ಯ ಸ್ಪರ್ಧೆ: ಗೆಳೆಯರ ಬಳಗ ನಗರ ಭಾಗದ ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಹಾಡುಗಳ ನೃತ್ಯ ಸ್ಪರ್ಧೆ ಏರ್ಪಡಿಸಿದ್ದು ವಿಶೇಷವಾಗಿತ್ತು.
ಸ್ಪರ್ಧೆಯಲ್ಲಿ ನಗರ ಪದವಿ ಪೂರ್ವ ಕಾಲೇಜು, ನಗರ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಚಿಕ್ಕಪೇಟೆ, ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆ, ಬಾಲಕರ ಶಾಲೆ, ನೂಲಿಗ್ಗೇರಿ ಸರ್ಕಾರಿ ಪ್ರಾಥಮಿಕ ಶಾಲೆ, ಅಮೃತ ವಿದ್ಯಾಲಯ ಶಾಲೆಗಳು ಭಾಗವಹಿಸಿದ್ದವು.
ಮೂರನೇ ತರಗತಿಯ ನೂಲಿಗ್ಗೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಹಿತಾ ಕರುಣಾಕರ ಶೆಟ್ಟಿ 101 ಕೌರವರ ಹೆಸರನ್ನು ಹೇಳಿ ಪ್ರಶಂಸೆಗೆ ಪಾತ್ರರಾದರು.
ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದುಕೊಂಡು ₹ 10,000 ನಗದು, ಟ್ರೋಫಿ ಗೆದ್ದುಕೊಂಡಿತು. ನಗರ ಸರ್ಕಾರಿ ಬಾಲಕಿಯರ ಶಾಲೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ₹ 7,000 ನಗದು, ಟ್ರೋಫಿ ಮುಡಿಗೇರಿಸಿಕೊಂಡಿತು. ನಗರ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡು ₹ 5,000 ಮತ್ತು ಟ್ರೋಫಿಯನ್ನು ಪಡೆದುಕೊಂಡಿತು.
ತೀರ್ಪುಗಾರರಾಗಿ ನೃತ್ಯಪಟುಗಳಾದ ದ್ರುವ, ಸೃಜನ್ ವಿಜೇತರನ್ನು ಘೋಷಿಸಿದರು. ಕಾರ್ಯಕ್ರಮದಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಕೂಡ ನಡೆಯಿತು. ಕಾರ್ಯಕ್ರಮವನ್ನು ನಿರೂಪಕಿ ಅಶ್ವಿನಿ ಸುಧೀಂದ್ರ ಪಂಡಿತ್ ನಿರ್ವಹಿಸಿದರು.
ಸಂಘಟಕರ ಪರವಾಗಿ ನಿತಿನ್ ನಗರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಅಭಿನಂದಿಸಿದರು.
ನಿತಿನ್ ನಗರ, ಮಂಜುನಾಥ ಶೆಟ್ಟಿ, ಮನುಕುಮಾರ್, ಆಟೊ ಪ್ರಶಾಂತ್, ಸಂತೋಷ ಕುಮಾರ್, ಮಧುಕರ ಶೆಟ್ಟಿ, ಪೂರ್ಣೇಶ ಶೆಟ್ಟಿ, ರವಿಕಾಂತ ಜೋಗಿ, ಸುಧಾಕರ ಮಳಲಿ, ಅಸ್ಲಾಂಭಾಷಾ, ಅಶೋಕ ಜೋಗಿ, ಅಕ್ಷಯಕುಮಾರ್, ರವೀಶ್, ಮಧು, ಸತೀಶ್, ನೂತನ್, ನವೀನ್, ದಿನೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.