ADVERTISEMENT

ಸ್ವಂತ ಬಲದಿಂದಲೇ ಶತಮಾನೋತ್ಸವದತ್ತ ಕರ್ನಾಟಕ ಸಂಘ: ಡಾ.ಮನು ಬಳಿಗಾರ್ ಶ್ಲಾಘನೆ

ಪುಸ್ತಕ ಬಹುಮಾನ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 6:35 IST
Last Updated 29 ನವೆಂಬರ್ 2021, 6:35 IST
ಶಿವಮೊಗ್ಗದ ಕರ್ನಾಟಕ ಸಂಘ ಭಾನುವಾರ ಹಮ್ಮಿಕೊಂಡಿದ್ದ 2020ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿದರು.
ಶಿವಮೊಗ್ಗದ ಕರ್ನಾಟಕ ಸಂಘ ಭಾನುವಾರ ಹಮ್ಮಿಕೊಂಡಿದ್ದ 2020ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿದರು.   

ಶಿವಮೊಗ್ಗ: ಸರ್ಕಾರದ ಅನುದಾನಕ್ಕಾಗಿ ಕಚೇರಿಗಳಿಗೆ ಅಲೆಯುವ ಸಂಘ ಸಂಸ್ಥೆಗಳೇ ಹೆಚ್ಚಿರುವಾಗ ಸ್ವಂತ ಬಲದಿಂದಲೇ ಶತಮಾನೋತ್ಸವದತ್ತ ಸಾಗುತ್ತಿರುವ ಕರ್ನಾಟಕ ಸಂಘದ ಕಾರ್ಯ ಅನನ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್ ಶ್ಲಾಘಿಸಿದರು.

ಕರ್ನಾಟಕ ಸಂಘ ಭಾನುವಾರ ಹಮ್ಮಿಕೊಂಡಿದ್ದ 2020ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಸಂಘ ಗುಣಮಟ್ಟ, ಪಾರದರ್ಶಕತೆ ಹಾಗೂ ಆದರ್ಶದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಸರ್ಕಾರದ ಅನುದಾನ ಪಡೆಯದೆ ಸ್ವಂತ ಬಲದ ಮೇಲೆ 91 ವರ್ಷಗಳನ್ನು ಪೂರೈಸಿರುವುದು ಸಂಘದ ದೃಢತೆಗೆ ಸಾಕ್ಷಿ ಎಂದು ಬಣ್ಣಿಸಿದರು.

ADVERTISEMENT

ಪ್ರಶಸ್ತಿ ಪುರಸ್ಕೃತರು ಇನ್ನೂ ಹೆಚ್ಚಿನ ಅಧ್ಯಯನ ಮಾಡಬೇಕು. ಮತ್ತಷ್ಟು ಪ್ರಶಸ್ತಿಗಳಿಂದ ಪುರಸ್ಕೃತರಾಗಬೇಕು ಎಂದು ಕಿವಿಮಾತು ಹೇಳಿದರು.

ಸೀತಾ ರಾಮಾಯಣ ಸಚಿತ್ರ ಕಥನ ಕೃತಿಗೆ ಪ್ರೊ.ಎಸ್.ವಿ. ಪರಮೇಶ್ವರಭಟ್ಟ ಪ್ರಶಸ್ತಿ ಸ್ವೀಕರಿಸಿದ ಪದ್ಮರಾಜ ದಂಡಾವತಿ ಮಾತನಾಡಿ, ‘ಹೆಚ್ಚಿನ ಮಹಿಳೆಯರು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಪ್ರಶಸ್ತಿ ಆಯ್ಕೆಯಲ್ಲೂ ಅವರೇ ಮುಂದಿರುವುದು ಮಹಿಳಾ ಸಾಹಿತ್ಯ ಮತ್ತುಷ್ಟು ಬಲಗೊಳ್ಳುತ್ತಿರುವುದರ ಸಂಕೇತ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಮನೆಯ ಮೊದಲ ಶಿಕ್ಷಕಿ ತಾಯಿಯ ಕೈಯಲ್ಲಿ ಪುಸ್ತಕದ ಬದಲು ರಿಮೋಟ್ ಬಂದಿದೆ.
ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಇಂತಹ ಮನೋಭಾವದ ಫಲವಾಗಿ ಓದುವ ಸಂಸ್ಕೃತಿ ನಾಶವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನದಿಂದಾಗಿ ಮೌಲ್ಯಯುತ ಪ್ರಜ್ಞೆಯ ಯುವ ಪೀಳಿಗೆ ಸೃಷ್ಟಿಸಲು ಸಾಧ್ಯ ಎಂದು ಹೇಳಿದರು.

ಬಹುಮಾನ ಪುರಷ್ಕೃತರಾದ ಹ.ಸ. ಬ್ಯಾಕೋಡ, ಪದ್ಮರಾಜ ದಂಡಾವತಿ, ಶ್ರೀದೇವಿ ಕೆರೆಮನೆ, ಎ.ಎಸ್‌. ಮಕಾನದಾರ, ಡಾ.ಬಿ.ಆರ್. ಶ್ರುತಿ, ಆಶಾ ಜಗದೀಶ್, ಟಿ.ಎಸ್‌. ಮಂಗಳಾ, ಎಂ. ಜಾನಕಿ, ನಡಹಳ್ಳಿ ವಸಂತ್‌, ದವನ ಸೊರಬ ಅವರಿಗೆ ಬಹುಮಾನ ವಿತರಿಸಲಾಯಿತು.

ಛಾಯಾಚಿತ್ರ ಹಾಗೂ ಸಾಂಪ್ರದಾಯಿಕ ಚಿತ್ರಕಲೆ ಪ್ರದರ್ಶನ ನೀಡಿದ ಎನ್. ಶಿವಕುಮಾರ್, ಆಯನೂರು ಗಿರಿ, ಸಿ.ಎಸ್. ಕಾತ್ಯಾಯಿನಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.