ಶಿವಮೊಗ್ಗ:ನೈಸರ್ಗಿಕವಾಗಿ ದೊರಕುವ ವಸ್ತು ಬಳಸಿಕೊಂಡು ಕೃಷಿ ಮಾಡಿದರೆ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಸಂಖ್ಯೆ ವೃದ್ಧಿಸಬಹುದು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಂಜುನಾಥ್ ಕೆ. ನಾಯ್ಕ ಪ್ರತಿಪಾದಿಸಿದರು.
ಕೃಷಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯವಾಹಿ ಸಂಶೋಧನಾ ಯೋಜನಾ ಸಭೆಯಲ್ಲಿ ನೈಸರ್ಗಿಕ ಕೃಷಿ ಯೋಜನೆಯ ಹಸ್ತ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೃಷಿ ಉತ್ಪಾದನಾ ವೆಚ್ಚ ಕಡಿತಗೊಳಿಸಿದರೆ ಹವಾಮಾನ ವೈಪರೀತ್ಯದಿಂದ ಎದುರಾಗುವ ಅಪಾಯ ತಗ್ಗಿಸಬಹದಾಗಿದೆ ಎಂದರು.
ಯೋಜನಾ ಸಭೆಯ ಮುಖ್ಯಸ್ಥ ಡಾ.ಎಚ್.ಕೆ.ವೀರಣ್ಣ, ಈ ಯೋಜನೆ ಅಡಿ ಐದು ಜಿಲ್ಲೆಗಳ 14 ತಾಲ್ಲೂಕು ವ್ಯಾಪ್ತಿಯ 37 ಕ್ಲಸ್ಟರ್ ಆಯ್ಕೆ ಮಾಡಲಾಗಿದೆ. 97 ಗ್ರಾಮಗಳ 2 ಸಾವಿರ ಹೆಕ್ಟೇರ್ ರೈತರ ತಾಖಿನಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅಡಿಕೆ, ತೆಂಗು, ಮೆಕ್ಕೆಜೋಳ, ಭತ್ತ, ತಂಬಾಕು, ಆಲೂಗಡ್ಡೆ, ಬಾಳೆ, ಕಾಳುಮೆಣಸು, ಶುಂಠಿ, ಟೊಮಾಟೊ, ಮೆಣಸಿನಕಾಯಿ ಬೆಳೆಗಳನ್ನು ಪ್ರಾತ್ಯಕ್ಷಿಕೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಆರ್. ಗುರುಮೂರ್ತಿ, ಡೀನ್ ಡಾ.ಎಚ್.ಎಂ.ಚಿದಾನಂದಪ್ಪ ನೈಸರ್ಗಿಕ ಕೃಷಿ ಯೋಜನೆಯ ಹಸ್ತ ಪತ್ರಿಕೆ ಬಿಡುಗಡೆ ಮಾಡಿದರು.
ಯೋಜನೆ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಪೂರಕವಾದ ವಿಷಯಗಳ ಕುರಿತು ಕೃಷಿ ಅಧಿಕಾರಿಗಳು, ರೈತ ಪ್ರತಿನಿಧಿಗಳು, ಕಾರ್ಯವಾಹಿ ಸಂಶೋಧನಾ ಯೋಜನಾ ತಂಡದ ವಿಜ್ಞಾನಿಗಳು ಚರ್ಚೆ ನಡೆಸಿದರು.
ಡಾ.ಬಿ.ಸಿ. ಧನಂಜಯ, ಡಾ.ಶರಣಬಸಪ್ಪ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.