ADVERTISEMENT

ಬಿಬಿಎಂ ಪದವೀಧರನ ಕೃಷಿ ಪ್ರೀತಿ

ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಾಣಲು ಮುಂದಾದ ಯುವ ರೈತ

ಎಚ್.ಎಸ್.ರಘು
Published 18 ಆಗಸ್ಟ್ 2021, 5:03 IST
Last Updated 18 ಆಗಸ್ಟ್ 2021, 5:03 IST
ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ತಮ್ಮ ಕೃಷಿ ಭೂಮಿಯಲ್ಲಿ ಕಾಳು ಮೆಣಸು ಬೆಳೆದ ರೈತ ಸಂದೇಶ್
ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ತಮ್ಮ ಕೃಷಿ ಭೂಮಿಯಲ್ಲಿ ಕಾಳು ಮೆಣಸು ಬೆಳೆದ ರೈತ ಸಂದೇಶ್   

ಶಿಕಾರಿಪುರ: ಕೃಷಿ ಪ್ರೀತಿ ಹಚ್ಚಿಕೊಂಡಿರುವ ಬಿಬಿಎಂ ಪದವೀಧರ ಸಂದೇಶ್ ಕೃಷಿ ಕ್ಷೇತ್ರದಲ್ಲಿ ಹಲವು ಪ್ರಯೋಗಗಳ ಮೂಲಕ ಪ್ರಗತಿ ಕಾಣುತ್ತಿದ್ದಾರೆ.

ತಾಲ್ಲೂಕಿನ ಅಂಬಾರಗೊಪ್ಪ ಗ್ರಾಮದ ರೈತ ಸಂದೇಶ್ ಪದವಿ ಪಡೆದರೂ, ವಿದ್ಯಾಭ್ಯಾಸ ಮುಂದುವರಿಸಿ ಕಂಪನಿ ಕೆಲಸಕ್ಕೆ ಹೋಗದೆ ಗ್ರಾಮದಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಗ್ರಾಮ ತೊರೆದು ಪಟ್ಟಣ ಸೇರಿ ವೃತ್ತಿ ನಿರ್ವಹಿಸುವವರ ಮಧ್ಯೆ ಸಂದೇಶ್ ಕೃಷಿ ಚಟುವಟಿಕೆಯಲ್ಲಿ ತೃಪ್ತಿ ಕಾಣುತ್ತಿದ್ದಾರೆ.

ಸುಮಾರು 9 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಂದೇಶ್‌ ಸಾವಯವ ಕೃಷಿ ಪದ್ಧತಿ ಜತೆ ಮಿತವಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.

ADVERTISEMENT

ಅಡಿಕೆ, ತೆಂಗು, ಬಾಳೆ, ಶುಂಠಿ, ಕಾಳುಮೆಣಸು, ಕರ್ಬೂಜ, ಕಲ್ಲಂಗಡಿ, ಮಾವು, ಶ್ರೀಗಂಧ, ಸಾಗುವನಿ ಸೇರಿ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಕೃಷಿ ಭೂಮಿಯಲ್ಲಿ ದೀರ್ಘಾವಧಿಯ ಹಣ್ಣುಗಳನ್ನು ಬೆಳೆಯಲು ತಯಾರಿ ನಡೆಸಿದ್ದಾರೆ. ಪ್ರಸ್ತುತ ತಮ್ಮ ಕೃಷಿ ಭೂಮಿಯಲ್ಲಿ ವಿವಿಧ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಶುಂಠಿ ಬೆಳೆಗೆ ಉತ್ತಮ ಬೆಲೆ ದೊರೆಯದ ಕಾರಣ ಸ್ವಲ್ಪ ಪ್ರಮಾಣದ ನಷ್ಟ ಅನುಭವಿಸಿದ್ದಾರೆ.

‘ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ಮಣ್ಣಿನ ಫಲವತ್ತತೆ ಪ್ರಮುಖ ಪಾತ್ರ ವಹಿಸುತ್ತದೆ. ರೈತರು ಮಣ್ಣು ಪರೀಕ್ಷೆ ನಡೆಸುವ ಮೂಲಕ ಮಣ್ಣಿನ ಫಲವತ್ತತೆಗೆ ತಕ್ಕಂತೆ ಬೆಳೆ ಬೆಳೆದಾಗ ಕೃಷಿ ಚಟುವಟಿಕೆಯಲ್ಲಿ ಲಾಭ ಗಳಿಸಲು ಸಾಧ್ಯವಾಗುತ್ತದೆ. ಜೀವನದಲ್ಲಿ ಯಾವುದೇ ವೃತ್ತಿಯನ್ನು ನಿರ್ವಹಿಸಲು ಸಾಧ್ಯವಾಗುವಂತಹ ಅನುಭವವನ್ನು ಕೃಷಿ ಚಟುವಟಿಕೆ ನೀಡುತ್ತದೆ’ ಎನ್ನುತ್ತಾರೆ ರೈತ ಸಂದೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.