ADVERTISEMENT

ಬೋಂಡಾ, ಚಿತ್ರಾನ್ನ ಮಾಡಿ ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 3:46 IST
Last Updated 3 ಏಪ್ರಿಲ್ 2021, 3:46 IST
ಸಾಗರದಲ್ಲಿ ಶುಕ್ರವಾರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕೆಎಸ್‌ಆರ್‌ಟಿಸಿ ನೌಕರರು ಬೋಂಡಾ, ಚಿತ್ರಾನ್ನ ಮಾರಾಟ ಮಾಡಿ ಪ್ರತಿಭಟನೆ ನಡೆಸಿದರು
ಸಾಗರದಲ್ಲಿ ಶುಕ್ರವಾರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕೆಎಸ್‌ಆರ್‌ಟಿಸಿ ನೌಕರರು ಬೋಂಡಾ, ಚಿತ್ರಾನ್ನ ಮಾರಾಟ ಮಾಡಿ ಪ್ರತಿಭಟನೆ ನಡೆಸಿದರು   

ಸಾಗರ: ತಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕೆಎಸ್‌ಆರ್‌ಟಿಸಿ ನೌಕರರು ಶುಕ್ರವಾರ ಬೋಂಡಾ, ಚಿತ್ರಾನ್ನ ಮಾರಾಟ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು.

ಸಾರಿಗೆ ನೌಕರರ ಸಂಘದ ನಾಗರಾಜ್ ನಿಟ್ಟೂರು, ‘ಕಡಿಮೆ ಸಂಬಳಕ್ಕೆ ಕೆಎಸ್‌ಆರ್‌ಟಿಸಿ ನೌಕರರು ದುಡಿಯುತ್ತಿದ್ದಾರೆ. ಸಂಸ್ಥೆಯ ಏಳಿಗೆಗೆ ಅಹರ್ನಿಶಿ ದುಡಿಯುತ್ತಿದ್ದಾರೆ. ಈ ಕಾರಣಕ್ಕೆ ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಕೆಎಸ್‌ಆರ್‌ಟಿಸಿ ಹೆಸರು ಮಾಡಿದೆ. ಆದಾಗ್ಯೂ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಖಂಡನೀಯ’ ಎಂದರು.

‘6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿದೆ. ಶೀಘ್ರವಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಸರ್ಕಾರ ಈವರೆಗೂ ಈಡೇರಿಸಿಲ್ಲ’ ಎಂದು ದೂರಿದರು.

ADVERTISEMENT

ಸಾರಿಗೆ ನೌಕರರ ಒಕ್ಕೂಟದ ಚಂದ್ರಶೇಖರ್, ‘ಸರ್ಕಾರ ದಿನಗೂಲಿ ನೌಕರರಿಗಿಂತ ಕಡೆಯಾಗಿ ಸಾರಿಗೆ ನೌಕರರನ್ನು ಕಾಣುತ್ತಿದೆ’ ಎಂದು ಆಪಾದಿಸಿದರು.

ಪ್ರಮುಖರಾದ ಗುರುಸ್ವಾಮಿ, ಚಂದ್ರಶೇಖರ್ ಎಸ್., ಬಸಪ್ಪ ನಾಗರಹಳ್ಳಿ, ಶಾಮ್ ಕುಮಾರ್, ದಾಮೋಧರ್, ಪ್ರಭು ಕುಮಾರ್, ಪರಶುರಾಮ್, ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.