
ಸಾಗರ: ನೈರುತ್ಯ ರೈಲ್ವೆ ತಾಳಗುಪ್ಪದಿಂದ ಮೈಸೂರು ನಡುವೆ ಸಂಚರಿಸುವ ಕುವೆಂಪು ಎಕ್ಸ್ಪ್ರೆಸ್ ರೈಲು ಸಂಚಾರದ ವೇಳಾಪಟ್ಟಿ ಬದಲಿಸಿದೆ. ಇದು ಈ ಭಾಗದ ರೈಲು ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಈವರೆಗೆ ತಾಳಗುಪ್ಪ– ಬೆಂಗಳೂರು ರೈಲು ತಾಳಗುಪ್ಪ ನಿಲ್ದಾಣವನ್ನು 5.30ಕ್ಕೆ ಬಿಡುತ್ತಿತ್ತು. ನಂತರ 6.15ಕ್ಕೆ ತಾಳಗುಪ್ಪ–ಮೈಸೂರು ಕುವೆಂಪು ಎಕ್ಸ್ಪ್ರೆಸ್ ರೈಲು ಹೊರಡುತ್ತಿತ್ತು. ನವೆಂಬರ್ 2ರಿಂದ ಕುವೆಂಪು ಎಕ್ಸ್ಪ್ರೆಸ್ ರೈಲು ನಸುಕಿನ 5.50ಕ್ಕೆ ತಾಳಗುಪ್ಪದಿಂದ ಹೊರಡಲಿದೆ.
ಮುಂಜಾನೆ 45 ನಿಮಿಷಗಳ ಅಂತರ ಇದ್ದ ಎರಡೂ ರೈಲುಗಳು ಓಡಾಟದ ಅವಧಿಯನ್ನು ಈಗ 20 ನಿಮಿಷಕ್ಕೆ ತಗ್ಗಿಸಲಾಗಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ತಗ್ಗಲಿದೆ. ಆರ್ಥಿಕವಾಗಿಯೂ ಲಾಭದಾಯಕವಲ್ಲ ಎಂದು ಸಾಗರ ತಾಲ್ಲೂಕು ರೈಲ್ವೆ ಹೋರಾಟ ಸಮಿತಿ ಪ್ರಮುಖ ಕುಮಾರಸ್ವಾಮಿ ಹೇಳುತ್ತಾರೆ.
ಈ ಮೊದಲು ಕುವೆಂಪು ಎಕ್ಸ್ಪ್ರೆಸ್ ಬೆಳಿಗ್ಗೆ 6.15ಕ್ಕೆ ಹೊರಡುತ್ತಿದ್ದಾಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಭಾಗದ ಪ್ರಯಾಣಿಕರು ತಾಳಗುಪ್ಪಕ್ಕೆ ಬಂದು ಆ ರೈಲಿನ ಪ್ರಯೋಜನ ಪಡೆಯುತ್ತಿದ್ದರು. ಈಗ ಸಮಯವನ್ನು 5.50ಕ್ಕೆ ನಿಗದಿ ಮಾಡಿರುವುದರಿಂದ ಆ ಹೊತ್ತಿಗೆ ಬಸ್ಗಳ ಸೌಲಭ್ಯ ಇಲ್ಲ. ತಾಳಗುಪ್ಪಕ್ಕೆ ಬರಲು ಖಾಸಗಿ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.
ಗಂಟೆ ಕಾಲ ಕ್ರಾಸಿಂಗ್: ಮೈಸೂರಿನಿಂದ ತಾಳಗುಪ್ಪಕ್ಕೆ ರಾತ್ರಿ ಹೊರಡುವ ರೈಲು ಇಲ್ಲಿಯವರೆಗೂ ಮುಂಜಾನೆ 6 ಗಂಟೆಗೆ ಸಾಗರ ನಿಲ್ದಾಣ ತಲುಪುತ್ತಿತ್ತು. ಈಗ ಬದಲಾದ ಸಮಯದಲ್ಲಿ ತಾಳಗುಪ್ಪದಿಂದ ಹೊರಡುವ ರೈಲಿಗೆ ಕ್ರಾಸಿಂಗ್ ಕೊಡಲು ಆನಂದಪುರ ನಿಲ್ದಾಣದಲ್ಲಿ ಗಂಟೆಗೂ ಹೆಚ್ಚು ಕಾಲ ಕಾಯಬೇಕಿದೆ. ಇದರಿಂದ ಆ ರೈಲು ಬೆಳಿಗ್ಗೆ 7 ಗಂಟೆಯ ನಂತರ ಸಾಗರಕ್ಕೆ ಬರುತ್ತಿದೆ.
ಸಾಗರಕ್ಕೆ ಬರುವ ಪ್ರವಾಸಿಗರು ಇಲ್ಲಿಯವರೆಗೂ ಬೆಳಗಿನ ಜಾವ ಇಲ್ಲಿಗೆ ತಲುಪಿ ಸುತ್ತಲಿನ ಪ್ರವಾಸಿ ಕೇಂದ್ರಗಳು, ಧಾರ್ಮಿಕ ಕ್ಷೇತ್ರಗಳ ವೀಕ್ಷಣೆ ಮಾಡಲು ಒಂದು ದಿನದ ಪ್ರವಾಸ ಯೋಜಿಸಿಕೊಳ್ಳುತ್ತಿದ್ದರು. ಈಗ ರೈಲು ವಿಳಂಬವಾಗಿ ತಲುಪುತ್ತಿರುವುದರಿಂದ ಅವರಿಗೂ ತೊಂದರೆಯಾಗಿದೆ.
‘ಯಶವಂತಪುರದಿಂದ ಬೆಳಿಗ್ಗೆ 9ಕ್ಕೆ ಹೊರಟು ಶಿವಮೊಗ್ಗಕ್ಕೆ ಮಧ್ಯಾಹ್ನ 2ಕ್ಕೆ ತಲುಪುವ ರೈಲಿನ ಸಂಚಾರವನ್ನು ತಾಳಗುಪ್ಪದವರೆಗೂ ವಿಸ್ತರಿಸಿದರೆ ಈ ಭಾಗದ ಪ್ರಯಾಣಿಕರಿಗೆ ಹಗಲಿನ ವೇಳೆ ಬೆಂಗಳೂರು ಸಂಚಾರಕ್ಕೆ ಅನುಕೂಲವಾಗುತ್ತದೆ’ ಎಂಬುದು ಅವರ ಅಭಿಪ್ರಾಯ.
ಕುವೆಂಪು ಎಕ್ಸ್ಪ್ರೆಸ್ ರೈಲಿನ ಸಂಚಾರದ ಸಮಯವನ್ನು ಬದಲಿಸಿರುವುದು ಸಾಗರ ತಾಳಗುಪ್ಪ ಉತ್ತರ ಕನ್ನಡ ಭಾಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.– ಕುಮಾರಸ್ವಾಮಿ ರೈಲ್ವೆ ಹೋರಾಟ ಸಮಿತಿ ಸಾಗರ
ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು
‘ಕುವೆಂಪು ಎಕ್ಸ್ಪ್ರೆಸ್ ರೈಲು ತಾಳಗುಪ್ಪದಿಂದ ಬೆಳಿಗ್ಗೆ 5.50ಕ್ಕೆ ಹೊರಟರೆ ಬೀರೂರಿನಲ್ಲಿ ಧಾರವಾಡದಿಂದ ಬೆಂಗಳೂರಿಗೆ ಸಂಚರಿಸುವ ರೈಲಿನ ಸಂಪರ್ಕ ಸಿಗುತ್ತದೆ ಎಂಬ ಕಾರಣಕ್ಕೆ ಸಮಯ ಬದಲಿಸಲಾಗಿದೆ. ಸಾಗರ ಭಾಗದ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ವಿಷಯವನ್ನು ಇಲಾಖೆಯ ಮೇಲಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಶಮಾಸ್ ಹಮೀದ್ ಹೇಳುತ್ತಾರೆ.
ರೈಲು ನಿಲ್ದಾಣ ಅಭಿವೃದ್ಧಿ; ಆಮೆಗತಿಯಲ್ಲಿ ಕಾಮಗಾರಿ
ಸಾಗರ ರೈಲು ನಿಲ್ದಾಣದಲ್ಲಿ ₹23 ಕೋಟಿ ವೆಚ್ಚದಲ್ಲಿ ಪ್ಲಾಟ್ಫಾರಂಗೆ ಚಾವಣಿ ಲಿಫ್ಟ್ ಎಸ್ಕಲೇಟರ್ ಅಳವಡಿಸುವ ಹಾಗೂ ಕೆಫೆಟೇರಿಯಾ ಆರಂಭಿಸುವ ಕಾಮಗಾರಿ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಕೆಲಸ ಆಮೆಗತಿಯಲ್ಲಿ ಸಾಗಿದೆ. ಫ್ಲಾಟ್ ಫಾರಂನ ಮೇಲೆ ಮುಚ್ಚಿಗೆ ಇಲ್ಲದ ಕಾರಣ ಮಳೆಗಾಲದಲ್ಲಿ ಮಹಿಳೆಯರು ವೃದ್ಧರು ತೀರಾ ಪ್ರಯಾಸಪಟ್ಟು ರೈಲನ್ನು ಹತ್ತಬೇಕಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದರೂ ಈಗ ಕೆಲಸ ನಡೆಯುತ್ತಿರುವ ವೇಗ ನೋಡಿದರೆ ಸದ್ಯಕ್ಕೆ ಅದು ಪೂರ್ಣಗೊಳ್ಳುವಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ. ಬೆಂಗಳೂರಿನಿಂದ ತಾಳಗುಪ್ಪಕ್ಕೆ ರಾತ್ರಿ ತಲುಪುವ ರೈಲು ಶಿವಮೊಗ್ಗ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಬರುವಾಗ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಸಮಯದಲ್ಲಿ ರೈಲಿನಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.