ADVERTISEMENT

ಸರ್ಕಾರಿ ಶಾಲೆ ದುಃಸ್ಥಿತಿಗೆ ಪೋಷಕರ ಆಕ್ರೋಶ

ನಗರದ ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:22 IST
Last Updated 18 ಮೇ 2022, 4:22 IST
ಶಿವಮೊಗ್ಗದ ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದು:ಸ್ಥಿತಿ ವಿರೋಧಿಸಿ ಪೋಷಕರು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದ ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದು:ಸ್ಥಿತಿ ವಿರೋಧಿಸಿ ಪೋಷಕರು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಇಲ್ಲಿನ ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಬೀಳುವ ಹಂತದಲ್ಲಿದ್ದು, ಶಿಕ್ಷಣ ಇಲಾಖೆ, ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಶಾಲೆಗಳು ಶುರುವಾಗಿದ್ದು, ಮಕ್ಕಳ ಕಲರವ ಆರಂಭವಾಗಿದೆ. ಬೇಸಿಗೆಯ ರಜಾ ದಿನಗಳನ್ನು ಕಳೆದು ಮೊದಲ ದಿನ ಉತ್ಸಾಹದಿಂದ ಶಾಲೆಯಂಗಳದತ್ತ ಮಕ್ಕಳು ಹೆಜ್ಜೆ ಹಾಕಿದ್ದಾರೆ. ಮಕ್ಕಳನ್ನು ಅದ್ದೂರಿಯಾಗಿ ಶಾಲಾ ಸಿಬ್ಬಂದಿ ಸ್ವಾಗತ ಮಾಡಿಕೊಂಡಿದ್ದಾರೆ.

ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಶಾಲಾ ಕಟ್ಟಡ ಬಿರುಕು ಬಿಟ್ಟಿದ್ದು, ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಕೊಠಡಿಗಳು ಜಾಲಾವೃತಗೊಂಡಿವೆ. ಇಲ್ಲಿನ ಶಿಕ್ಷಕರು ಮುರಿದ ಶಾಲೆಯಲ್ಲೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಸರ್ಕಾರಿ ಶಾಲೆ ದುಃಸ್ಥಿತಿ ವಿರೋಧಿಸಿ ಶಿಕ್ಷಣ ಇಲಾಖೆ, ಅಧಿಕಾರಿಗಳ ವಿರುದ್ಧ ಪೋಷಕರು ಮತ್ತು ಮಕ್ಕಳು ಮಂಗಳವಾರ ಬೀದಿಗಳಿದು ಪ್ರತಿಭಟನೆ ನಡೆಸಿದರು.

ADVERTISEMENT

ಈ ಹಿಂದೆ ಮಳೆ ಬಿದ್ದಾಗ ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡಿತ್ತು. ಆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದಾಗ ಬಿಇಒ, ಡಿಡಿಪಿಐ ಆಗಮಿಸಿ ಕೂಡಲೇ ಹೊಸ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಶಾಲೆಯ ದುರಸ್ತಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೆ ಮಳೆಗೆ ಶಾಲಾ ಕಟ್ಟಡ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಹೇಗೆ ಕಳುಹಿಸಬೇಕು ಎಂದು ಪೋಷಕರು ಪ್ರಶ್ನಿಸಿದರು.

175 ಮಕ್ಕಳಿಗೆ 7 ಶಿಕ್ಷಕರು, 7 ಕೊಠಡಿಗಳು
ಶಾಲೆಯಲ್ಲಿ 175 ಮಕ್ಕಳಿಗೆ 7 ಶಿಕ್ಷಕರು, 7 ಕೊಠಡಿಗಳು ಇವೆ. ಇವುಗಳಲ್ಲಿ ಕೇವಲ ಎರಡು ಕೊಠಡಿಗಳು ಮಕ್ಕಳು ಕೂರಲು ಯೋಗ್ಯವಾಗಿವೆ. ತಕ್ಷಣ ಕೊಠಡಿಗಳನ್ನು ದುರಸ್ತಿ ಮಾಡಿಸಬೇಕು. ಈ ಹಿಂದೆ ದುರಸ್ತಿಗೆ ಮನವಿ ಮಾಡಲಾಗಿತ್ತು. ಆದರೆ, ಅನುದಾನದ ಕೊರತೆ ಕಾರಣ ಈವರೆಗೂ ದುರಸ್ತಿಯಾಗಿಲ್ಲ. ಮಳೆ ಬಂದರೆ 3 ಅಡಿ ನೀರು ನಿಲ್ಲುತ್ತದೆ. ಮೋಟಾರ್‌ ಇಟ್ಟು ನೀರನ್ನು ಹೊರಹಾಕಬೇಕು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವುದು ಅಸಾಧ್ಯವಾಗಿದೆ. ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ತಾತ್ಕಲಿಕವಾಗಿ ಬಾಡಿಗೆ ಕಟ್ಟಡದ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿಯೂ ಕೊಠಡಿ ಸಮಸ್ಯೆ ಇದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಎಸ್‌.ವೈ. ಜಯಮ್ಮ.

*
ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿದ್ದು, ಬಾಡಿಗೆಯನ್ನು ಸಹ ಕೊಟ್ಟಿಲ್ಲ. ಇದೀಗ ಕಟ್ಟಡದ ಮಾಲೀಕರು ಬಾಡಿಗೆಗೆ ಒತ್ತಾಯಿಸುತ್ತಿದ್ದಾರೆ. ಕೂಡಲೇ ಶಾಲಾ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ.
–ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.