ADVERTISEMENT

ಭದ್ರಾವತಿ | ಅಂಡರ್‌ಪಾಸ್ ರೈಲ್ವೆ ಬ್ರಿಡ್ಜ್‌ಗೆ ಲಾರಿ ಡಿಕ್ಕಿ: ರೈಲು ಸಂಚಾರ ವಿಳಂಬ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 14:20 IST
Last Updated 18 ಏಪ್ರಿಲ್ 2024, 14:20 IST
ಭದ್ರಾವತಿ ನಗರದ ರೈಲ್ವೆ ಅಂಡರ್‌ಪಾಸ್‌ ಬಳಿಯ ಕಬ್ಬಿಣದ ಬ್ಯಾರಿಕೇಡ್ ದುರಸ್ತಿ ಕಾರ್ಯ ಗುರುವಾರ ನಡೆಯಿತು
ಭದ್ರಾವತಿ ನಗರದ ರೈಲ್ವೆ ಅಂಡರ್‌ಪಾಸ್‌ ಬಳಿಯ ಕಬ್ಬಿಣದ ಬ್ಯಾರಿಕೇಡ್ ದುರಸ್ತಿ ಕಾರ್ಯ ಗುರುವಾರ ನಡೆಯಿತು   

ಭದ್ರಾವತಿ: ನಗರದ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ತಡರಾತ್ರಿ ರೈಲ್ವೆ ಅಂಡರ್‌ ಪಾಸ್‌ ಮೂಲಕ ಸಂಚರಿಸುತ್ತಿದ್ದ ಲಾರಿಯೊಂದು ರೈಲ್ವೆ ಹಳಿ ಹಾಗೂ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಹಳಿಗಳು ಏರುಪೇರಾಗಿದ್ದು, ಗುರುವಾರ ಬೆಳಿಗ್ಗೆ ಸಂಚರಿಸುವ ಎರಡು ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು. ಎರಡು ರೈಲುಗಳು ಸುಮಾರು ಎರಡು ಗಂಟೆ ತಡವಾಗಿ ಸಂಚರಿಸಿದವು. 

ಅಪಘಾತ ಸಂಭವಿಸಿದ್ದು ಹೇಗೆ?: 

ನಗರದ ರೈಲ್ವೆ ಅಂಡರ್‌ಪಾಸ್‌ನಲ್ಲಿ ನಿಗದಿಗಿಂತಲೂ ಎತ್ತರದ ವಾಹನಗಳು ಸಂಚರಿಸದಂತೆ ತಡೆಯಲು ಕಬ್ಬಿಣದ ಬ್ಯಾರಿಕೇಡ್‌ ಹಾಕಲಾಗಿದೆ. ಬುಧವಾರ ತಡರಾತ್ರಿ ಈ ಬ್ಯಾರಿಕೇಡ್‌ಗೆ ಲಾರಿ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

ಬ್ಯಾರಿಕೇಡ್‌ ಮುರಿದು, ಅದು ರೈಲ್ವೆ ಹಳಿಗೆ ಹೊಡೆದಿದ್ದರಿಂದ ಹಳಿಗಳು ಅಸ್ತವ್ಯಸ್ತಗೊಂಡವು. ಕೂಡಲೇ ರೈಲ್ವೆ ಸಿಬ್ಬಂದಿ ಹಳಿ ರಿಪೇರಿ ಕಾಮಗಾರಿ ನಡೆಸಿದರು. 

ADVERTISEMENT

ಕಾದು ಹೈರಾಣಾದ ಪ್ರಯಾಣಿಕರು :

ಹಳಿ ರಿಪೇರಿ ಕಾರ್ಯದ ಹಿನ್ನೆಲೆಯಲ್ಲಿ ಎರಡು ರೈಲುಗಳು ಸಂಚಾರದಲ್ಲಿ ವಿಳಂಬವಾಯಿತು. ಬೆಳಿಗ್ಗೆ 4.45ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 6.45ಕ್ಕೆ ತಲುಪಿತು. ಅಲ್ಲಿಯವರೆಗೂ ಈ ರೈಲು ನಗರ ನಿಲ್ದಾಣದಲ್ಲಿ ನಿಂತಿತ್ತು.

ಇನ್ನು, ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ಬೆಂಗಳೂರು ಜನಶತಾಬ್ದಿ ರೈಲು ಬೆಳಗ್ಗೆ 6.35ಕ್ಕೆ ಅಲ್ಲಿಂದು ಹೊರಟಬೇಕಾಯಿತು. ವಿಳಂಬಕ್ಕೆ ಕಾರಣ ಗೊತ್ತಾಗದೆ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.