ADVERTISEMENT

ಮಧು ಬಂಗಾರಪ್ಪ ಗೆಲ್ಲುವ ವಿಶ್ವಾಸವಿದೆ: ಗೀತಾ ಶಿವರಾಜ್ ಕುಮಾರ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 12:54 IST
Last Updated 17 ಏಪ್ರಿಲ್ 2019, 12:54 IST
ಸೊರಬ ತಾಲ್ಲೂಕಿನ ತವನಂದಿ ಗ್ರಾಮದಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜ್ ಕುಮಾರ್ ಮಾತನಾಡಿದರು
ಸೊರಬ ತಾಲ್ಲೂಕಿನ ತವನಂದಿ ಗ್ರಾಮದಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜ್ ಕುಮಾರ್ ಮಾತನಾಡಿದರು   

ಸೊರಬ: ಚುನಾವಣೆಯಲ್ಲಿ ಮಾತ್ರ ಹಿಂದುತ್ವ ಹಾಗೂ ರಾಮನ ನೆನಪು ಮಾಡಿಕೊಳ್ಳುವ ಬಿಜೆಪಿ ನಾಯಕರು ಸುಳ್ಳು ಭರವಸೆಗಳನ್ನು ನೀಡಿ ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಗೀತಾ ಶಿವರಾಜ್‌ಕುಮಾರ್ ದೂರಿದರು.

ಬುಧವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ತಾಲ್ಲೂಕಿನ ಹಾಲಗಳಲೆ, ಮಾಕೊಪ್ಪ, ಚಂದ್ರಗುತ್ತಿ, ಭಾರಂಗಿ ಹಾಗೂ ತವನಂದಿ ಗ್ರಾಮದಲ್ಲಿ ಪರ ಮತಯಾಚಿಸಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ದೇಶದ ಜನರಿಗೆ ಆಶ್ವಾಸನೆ ನೀಡಿ ಅಧಿಕಾರ ಪಡೆದ ಬಿಜೆಪಿ ಬಡವರ ಪರವಾಗಿ ಯಾವುದೇ ಯೋಜನೆ ರೂಪಿಸಿಲ್ಲ. ಬದಲಾಗಿ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಆಡಳಿತ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದೂರಿದರು.

ADVERTISEMENT

ಎಲ್ಲಾ ವರ್ಗದವರ ಧ್ವನಿಯಾಗಿ ಹೋರಾಟದ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಮಧು ಬಂಗಾರಪ್ಪ ಅವರನ್ನು ಜನರು ಈ ಬಾರಿ ಗೆಲ್ಲಿಸುವ ಹೊಣೆಗಾರಿಕೆ ಹೊರಬೇಕಿದೆ ಎಂದು ಮನವಿ ಮಾಡಿದರು.

ಮಧು ಬಂಗಾರಪ್ಪ ಅವರು ತಂದೆ ಬಂಗಾರಪ್ಪಾಜಿಯಂತೆ ತಾಲ್ಲೂಕಿನ ಎಲ್ಲಾ ಜಾತಿ, ಮತ, ವರ್ಗ, ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ವ್ಯಕ್ತಿ. ಈ ದಿಸೆಯಲ್ಲಿ ಕ್ಷೇತ್ರವನ್ನು ಸಾಧ್ಯವಾದಷ್ಟು ಮಟ್ಟಿಗೆ ಪಕ್ಷಾತೀತವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದರು.

10 ವರ್ಷಗಳಿಂದ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ. ದೇಶ ಒಡೆಯುವ ಬಿಜೆಪಿ ತೊಲಗಿಸಲು ಜೆಡಿಎಸ್-ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವಂತೆ ಮತದಾರರ ಮನವೊಲಿಸಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದಪ್ಪ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಎಚ್. ಗಣಪತಿ, ವಕ್ತಾರ ಎಂ.ಡಿ ಶೇಖರ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಗೌಡ, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಕಾಂಗ್ರೆಸ್ ಮಹಿಳಾ ಬ್ಲಾಕ್ ಅಧ್ಯಕ್ಷೆ ಸುಮಾ ಗಜಾನನ, ಜೆಡಿಎಸ್ ಬ್ಲಾಕ್ ಮಹಿಳಾ ಅಧ್ಯಕ್ಷೆ ಜ್ಯೋತಿ, ಮಂಜನಾಥ ಮಾಸ್ತರ್, ಓ.ಬಿ.ರಾಜಣ್ಣ, ಹನುಮಂತಪ್ಪ, ಶಿವಮ್ಮ, ಕಮಲಾಕ್ಷಿ, ಭೀಮಪ್ಪ, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.