ಶಿವಮೊಗ್ಗ:ಚುನಾವಣೆಯಲ್ಲಿ ಗೆಲುವು ಸಾಧಿಸಲು ಜನಪ್ರತಿನಿಧಿಗಳು ಎಷ್ಟು ಬೇಕಾದರೂ ಹಣ ಚೆಲ್ಲುತ್ತಾರೆ. ಹಣ ಮಾಡುವ ಸಲುವಾಗಿಯೇ ಕೆಲವರು ರಾಜಕೀಯಕ್ಕೆ ಬರುತ್ತಾರೆ ಎಂದು ಜೆಡಿಯು ಅಭ್ಯರ್ಥಿ ಮಹಿಮ ಪಟೇಲ್ ಟೀಕಿಸಿದರು.
ಶಿವಮೊಗ್ಗ ಲೋಕಸಭಾ ಉಪ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ರಾಷ್ಟ್ರಮಟ್ಟದಲ್ಲಿ ಜೆಡಿಯು, ಎನ್ಡಿಎ ಮೈತ್ರಿಕೂಟದಲ್ಲಿದೆ. ರಾಜ್ಯದಲ್ಲಿ ಮೈತ್ರಿ ಇಲ್ಲ. ರಾಜಕೀಯ ನಿಂತ ನೀರಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜಿಲ್ಲೆಯ ಜನರು ಸಮಾಜವಾದಿ ಚಳವಳಿಯ ಹಿನ್ನೆಲೆ ಹೊಂದಿದ್ದಾರೆ. ಒಳ್ಳೆಯ ಮನಸ್ಸಿನ ಪ್ರಾಮಾಣಿಕ ರಾಜಕಾರಣಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಚುನಾವಣೆ ರಣರಂಗವಾಗಬಾರದು. ಪ್ರಜಾಪ್ರಭುತ್ವದ ಆಟವಾಗಬೇಕು. ಹಣ ನೀರಿನಂತೆ ಸುರಿದು ಗೆಲುವು ಸಾಧಿಸಿದ ರಾಜಕಾರಣಿಗಳು ಅನಿವಾರ್ಯವಾಗಿ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ. ಹಾಗಾಗಿ, ಮತದಾರು ಪ್ರಜ್ಞಾವಂತರು, ಪ್ರಾಮಾಣಿಕರಿಗೆ ಮಣೆ ಹಾಕಬೇಕು. ಆಮಿಷಕ್ಕೆ ಬಲಿಯಾಗಿ ಅಪ್ರಮಾಣಿಕರ ಆಯ್ಕೆ ಮಾಡಬಾರದು. ಜನ ಜಾಗೃತಿಗಾಗಿಯೇ ಚುನಾವಣಾ ಕಣಕ್ಕೆ ಇಳಿದಿದ್ದೇನೆ ಎಂದರು.
‘1967ರಲ್ಲಿ ನನ್ನ ತಂದೆ ಜೆ.ಎಚ್. ಪಟೇಲರನ್ನು ಜಿಲ್ಲೆಯ ಜನರು ಲೋಕಸಭೆಗೆ ಆರಿಸಿ ಕಳುಹಿಸಿದ್ದರು. ಅಂದು ಲೋಕಸಭೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ದೇಶದ ಗಮನ ಸೆಳೆದಿದ್ದರು. ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಅವರ ಹಾದಿ ನನಗೆ ಶ್ರೀರಕ್ಷೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.