ಶಿಕಾರಿಪುರ: ಪಟ್ಟಣದ ಮಾಸೂರು ರಸ್ತೆಯಲ್ಲಿರುವಮಾಲತೇಶ ಹಾಗೂ ಮೈಲಾರಲಿಂಗೇಶ್ವರ ಗಟ್ ಪರವು ಕಾರ್ಯಕ್ರಮ ಶುಕ್ರವಾರ ನಡೆಯಿತು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಮಾಲತೇಶ ದೇವರ ಕಾರ್ಣಿಕೋತ್ಸವ ಅಂಗವಾಗಿ ಮಾಲತೇಶ ಹಾಗೂ ಮೈಲಾರಲಿಂಗೇಶ್ವರ ದೇವರ ಭಕ್ತರು ಹಾಗೂ ಗೊರವಯ್ಯನವರು ಸಂಪ್ರದಾಯದಂತೆ ಶಿಬಾರಕಟ್ಟೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಗೊರವಯ್ಯನವರು ಹಾಗೂ ದೇವರು ಹೊತ್ತ ಮಹಿಳೆಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಿಳೆಯರು, ಮಕ್ಕಳು ಸೇರಿ ನೂರಾರು ಸಂಖ್ಯೆಯಲ್ಲಿ ಭಕ್ತರು ಶಿಬಾರಕಟ್ಟೆ ಬಳಿ ಜಮಾಯಿಸಿದ್ದರು. ಗಟ್ ಪರವು ಪೂಜೆ ಅಂಗವಾಗಿ ಶಿಬಾರಕಟ್ಟೆಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಗೊರವಯ್ಯನವರು ಬಾಳೆಹಣ್ಣು, ಸಕ್ಕರೆ, ತುಪ್ಪ, ಹಾಲು ಬೆರೆಸಿ, ಹಣ್ಣು ತುಪ್ಪದ ನೈವೇದ್ಯ ಮಾಡಿ ಭಕ್ತರಿಗೆ ವಿತರಿಸಿದರು.
ಭಕ್ತರು ಮೈಲಾರಲಿಂಗೇಶ್ವರ ಧಾರ್ಮಿಕ ದೇವರಿಗೆ ‘ಏಳುಕೋಟಿ ಏಳುಕೋಟಿ ಚಾಂಗ್ ಬಲೋ’ ಎಂದು ಭಕ್ತಿಯಿಂದ ಜಯಘೋಷ ಹಾಕಿದರು. ನಂತರ ಗೊರವಯ್ಯನವರು ಹಾಗೂ ದೇವರ ಹೊತ್ತ ಮಹಿಳೆಯರು ಶಿಬಾರಕಟ್ಟೆಯಿಂದ ಮೆರವಣಿಗೆ ಮೂಲಕ ದೊಡ್ಡಕೇರಿ ಗಿಡ್ಡಯ್ಯ ದೇವಸ್ಥಾನಕ್ಕೆ ಬಂದುವಿಶೇಷ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.