ADVERTISEMENT

ಶಿವಮೊಗ್ಗ | ನಾರಿ ಶಕ್ತಿ ಬಜೆಟ್ ಮಹಿಳಾ ಸಬಲೀಕರಣಕ್ಕೆ ದಿಕ್ಕು: ಮಾಳವಿಕಾ ಅವಿನಾಶ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:47 IST
Last Updated 15 ಫೆಬ್ರುವರಿ 2026, 3:47 IST
ಶಿವಮೊಗ್ಗದಲ್ಲಿ ನಡೆದ ಮಹಿಳಾ ಜಾಗೃತಿ ಸಮಾವೇಶವನ್ನು ಬಿಜೆಪಿ ರಾಜ್ಯ ವಕ್ತಾರರಾದ ಮಾಳವಿಕಾ ಅವಿನಾಶ್ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ನಡೆದ ಮಹಿಳಾ ಜಾಗೃತಿ ಸಮಾವೇಶವನ್ನು ಬಿಜೆಪಿ ರಾಜ್ಯ ವಕ್ತಾರರಾದ ಮಾಳವಿಕಾ ಅವಿನಾಶ್ ಉದ್ಘಾಟಿಸಿದರು   

ಶಿವಮೊಗ್ಗ: ಕೇಂದ್ರ ಸರ್ಕಾರದ ನಾರಿ ಶಕ್ತಿ ಬಜೆಟ್ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಬಲ ತುಂಬುವಂತದ್ದಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್ ಹೇಳಿದರು.

ಅವರು ಶನಿವಾರ ನಗರದ ಬಂಟರ ಭವನದಲ್ಲಿ ನಡೆದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರತಿ ಜಿಲ್ಲೆಗೆ ಮಹಿಳಾ ಹಾಸ್ಟೆಲ್ ಹಾಗೂ ಶೀಮಾರ್ಟ್ ಸ್ಥಾಪನೆ ಘೋಷಿಸಿರುವುದು ಮಹಿಳೆಯರಿಗೆ ಹೊಸ ಅವಕಾಶಗಳ ದ್ವಾರ ತೆರೆದಂತಾಗಿದೆ’ ಎಂದರು.

‘ಮಹಿಳೆಯರು ಕೇವಲ ಗೃಹಕಾರ್ಯಕ್ಕೆ ಸೀಮಿತರಲ್ಲ, ಉದ್ಯಮ, ವ್ಯಾಪಾರ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯ ತೋರಿಸಬಹುದು. ಶೀಮಾರ್ಟ್ ಮೂಲಕ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

‘ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೊರನಾಡುಗಳಲ್ಲಿ ವಾಸಿಸುವುದು ಹಿಂದೆ ಕಷ್ಟಕರವಾಗಿತ್ತು. ಸೂಕ್ತ ವಸತಿ ಸೌಲಭ್ಯಗಳ ಕೊರತೆ ಅನೇಕ ಅಡೆತಡೆಗಳನ್ನುಂಟು ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಗೊಂದು ಮಹಿಳಾ ಹಾಸ್ಟೆಲ್ ಆರಂಭಿಸುವ ನಿರ್ಧಾರ ಶ್ಲಾಘನೀಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರ ಮಹಿಳೆಯರು, ಯುವಕರು, ರೈತರು ಮತ್ತು ಬಡವರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಜನಧನ್, ಮುದ್ರಾ, ಪಿಎಂ ಆವಾಸ್ ಸೇರಿದಂತೆ ಹಲವು ಯೋಜನೆಗಳ ಮೂಲಕ ಮಹಿಳೆಯರ ಜೀವನದಲ್ಲಿ ಬದಲಾವಣೆ ತರಲಾಗಿದೆ’ ಎಂದರು.

‘ನಾರಿ ಶಕ್ತಿ ಬಜೆಟ್ ಕುರಿತು ಮಹಿಳಾ ಕಾರ್ಯಕರ್ತೆಯರಲ್ಲಿ ಜಾಗೃತಿ ಮೂಡಿಸುವುದೇ ಸಮಾವೇಶದ ಉದ್ದೇಶ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಮಹಿಳೆಯರಿಗೆ ಭಾಗ್ಯಲಕ್ಷ್ಮೀ ಬಾಂಡ್ ಹಾಗೂ ಸೈಕಲ್ ವಿತರಣೆ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು’ ಎಂದು ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಸಿ. ಮಂಜುಳಾ ಸ್ಮರಿಸಿದರು.

‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೂಪಿಸಿದ ಬಜೆಟ್ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವತ್ತ ಕೇಂದ್ರೀಕೃತವಾಗಿದೆ. ಮಹಿಳೆಯರು ದೇಶದ ಆರ್ಥಿಕತೆಗೆ ಶಕ್ತಿಯಾದ ಪಾಲುದಾರರು ಎಂಬುದು ಈ ಬಜೆಟ್‌ನ ಸಂದೇಶ’ ಎಂದು ಹೇಳಿದರು.

ಸಮಾವೇಶದಲ್ಲಿ ಹಲವು ಜನಪ್ರತಿನಿಧಿಗಳು ಹಾಗೂ ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕೇಂದ್ರ ಯೋಜನೆಗಳಿಗೆ ಕಾರ್ಯಕರ್ತೆಯರು ಸೇತುವೆಯಾಗಲಿ

  ‘ಕೇಂದ್ರದ ಯೋಜನೆಗಳು ಗ್ರಾಮೀಣ ಭಾಗದ ಕಟ್ಟಕಡೆಯ ಮಹಿಳೆಯರಿಗೂ ತಲುಪುವಂತೆ ಬಿಜೆಪಿ ಕಾರ್ಯಕರ್ತೆಯರು ಸೇತುವೆಯಾಗಬೇಕು. ಶೀಮಾರ್ಟ್‌ಗಳ ಸ್ಥಾಪನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಹಾಗೂ ಇನ್ನಿತರ ಮಹಿಳೆಯರಿಗೂ ಮಾರ್ಗದರ್ಶನ ನೀಡಬೇಕು ರಾಜ್ಯ ಸರ್ಕಾರ ಕೇಂದ್ರದ ಅನುದಾನಗಳ ಮೇಲೆ ಅವಲಂಬಿತವಾಗಿದ್ದು ಅದನ್ನು ಸಮರ್ಪಕವಾಗಿ ಪ್ರಸ್ತುತಪಡಿಸುವಲ್ಲಿ ವಿಫಲವಾಗುತ್ತಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.