ಶಿವಮೊಗ್ಗ: ಪಾಲಿಕೆ ವ್ಯಾಪ್ತಿಯ ಹಲವೆಡೆ ಮೆಸ್ಕಾಂ ಕೈಗೊಂಡಿರುವ ಯುಜಿ ಕೇಬಲ್ ಅಳವಡಿಕೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರು ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ಗೆ ಗುರುವಾರ ಮನವಿ ಸಲ್ಲಿಸಿದರು.
ಆಲ್ಕೊಳ 100 ಅಡಿ ರಸ್ತೆಗೆ ಅಡ್ಡಲಾಗಿ ಕೇಬಲ್ ಹಾಕಲು ಭೂಮಿ ಅಗೆದ ನಂತರ ಅತ್ಯಂತ ಕಳಪೆಯಾಗಿ ಮುಚ್ಚಲಾಗಿದೆ. ಕಾಮಗಾರಿ ನಡೆದು ಒಂದು ತಿಂಗಳಲ್ಲಿ ಕಾಮಗಾರಿ ಸಂಪೂರ್ಣ ಹಾಳಾಗಿದೆ. ರಸ್ತೆ ಬಳಕೆದಾರರಿಗೆ ತೊಂದರೆಯಾಗಿದೆ ಎಂದು ದೂರಿದರು.
ಕಳಪೆ ಕಾಮಗಾರಿ ಪರಿಣಾಮ ಆರ್ಥಿಕ ನಷ್ಟವಾಗಿದೆ. 100 ಅಡಿ ರಸ್ತೆಯಿಂದ ಕಲ್ಲಹಳ್ಳಿಗೆ ಹೋಗುವ ರಸ್ತೆಯ ಆರಂಭದಲ್ಲೇ ಹಾಳಾಗಿದೆ.
100 ಅಡಿ ರಸ್ತೆಯ ವಿಭಜಕ ಕಾಮಗಾರಿ ಮುಗಿದಿದ್ದರೂ ಪುನರ್ ನಿರ್ಮಾಣ ಮಾಡಿಲ್ಲ. ಎಪಿಎಂಸಿ ತರಕಾರಿ ಮಾರುಕಟ್ಟೆ ಎದುರಿಗೆ ಇಂಟರ್ ಲಾಕಿಂಗ್ ಟೈಲ್ಸ್ ತೆಗೆದು ಕೇಬಲ್ ಹಾಕಿ ವರ್ಷ ಕಳೆದರೂ ಸರಿಪಡಿಸಿಲ್ಲ. ಆಲ್ಕೊಳ ಸರ್ಕಲ್ನಿಂದ 100 ಅಡಿ ರಸ್ತೆಯ ಉದ್ದಕ್ಕೂ ಎರಡೂ ಬದಿಯಲ್ಲಿ ರಸ್ತೆ ಅಗೆಯಲಾಗಿದೆ. ಅದನ್ನೂ ಮುಚ್ಚಿಲ್ಲ ಎಂದು ದೂರಿದರು.
ಜಯನಗರದಲ್ಲಿ ಯುಜಿ ಕೇಬಲ್ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಕಾಮಗಾರಿ ವ್ಯವಸ್ಥಿತವಾಗಿ ಪೂರ್ಣಗೊಳಿಸದೆ, ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಇರುವ ಪರಿಣಾಮ ನಾಗರಿಕರಿಗೆ ತೊಂದರೆ ಆಗಿದೆ. ಪ್ರತಿ ಮನೆಗಳವರೆಗೂ ಕೇಬಲ್ ಹಾಕಲಾಗಿದೆ. ನಂತರ ಕಾಮಗಾರಿ ಪೂರ್ಣಗೊಳಿಸಿಲ್ಲ.
ಹಲವು ಕಡೆಗಳಲ್ಲಿ ನಿಯಮದ ಪ್ರಕಾರ ಎಷ್ಟು ಆಳದಲ್ಲಿ ಕೇಬಲ್ ಅಳವಡಿಸಿಲ್ಲ ಎಂದು ಆರೋಪಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಮುಖಂಡರಾದ ಕೆ.ವಿ. ವಸಂತಕುಮಾರ್, ಎಸ್.ಬಿ. ಅಶೋಕ್ ಕುಮಾರ್, ಅಶೋಕ್ ಯಾದವ್ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.