ಶಿವಮೊಗ್ಗ: ‘ನಾನು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಮಾತ್ರ ಬೈದಿದ್ದೇನೆಯೇ ಹೊರತು, ಇಡೀ ಕಾಂಗ್ರೆಸಿಗರಿಗೆ ಅಲ್ಲ. ಕಾಂಗ್ರೆಸ್ನವರು ಬೇಕು ಅಂತ ಇದನ್ನು ದೊಡ್ಡ ವಿಷಯ ಮಾಡುತ್ತಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಸಿಟ್ಟಿನಲ್ಲಿ ಆ ಪದ ಬಳಕೆ ಮಾಡಿದೆ. ನಾನು ತಕ್ಷಣವೇ ಕ್ಷಮೆ ಕೇಳಿದ್ದೇನೆ. ತಪ್ಪು ಎಂದು ಒಪ್ಪಿಕೊಂಡಿದ್ದೇನೆ. ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸುಲಭ್ ಶೌಚಾಲಯಕ್ಕೆ ಮೋದಿ ಹೆಸರು ಇಡಬೇಕೆಂದು ವ್ಯಂಗ್ಯವಾಗಿ ಹೇಳಿರುವುದು ಎಷ್ಟು ಸರಿ? ಹರಿಪ್ರಸಾದ್ ವಿರುದ್ಧ ಕಾಂಗ್ರೆಸ್ ಏನು ಕ್ರಮ ಕೈಗೊಳ್ಳುತ್ತದೆ’ ಎಂದು ಪ್ರಶ್ನಿಸಿದರು.
‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸಿಗರನ್ನು ನಾನು ಇವತ್ತೂ ಗೌರವಿಸುತ್ತೇನೆ. ಅನೇಕ ಆರ್ಎಸ್ಎಸ್ ಮುಖಂಡರು ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು. ಆದರೆ, ಅಂದಿನ ಕಾಂಗ್ರೆಸ್ ಬೇರೆ, ಇಂದಿನ ಕಾಂಗ್ರೆಸ್ ಬೇರೆ’ ಎಂದು ವ್ಯಂಗ್ಯವಾಡಿದರು.
‘ಬಿಜೆಪಿ ಮೀಸಲಾತಿ ವಿರೋಧಿ ಎಂದು ಹೇಳುವವರಿಗೆ ಇತಿಹಾಸ ಗೊತ್ತಿರಬೇಕು. ದಲಿತರಿಗೆ ಮೀಸಲಾತಿ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದರೂ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿಯನ್ನು ಮುಂದುವರಿಸಿದರು. ಕಾಂಗ್ರೆಸಿಗರಿಗೆ ಇದೆಲ್ಲ ಅರ್ಥವೇ ಆಗುವುದಿಲ್ಲ. ಟೀಕಿಸುವುದಷ್ಟೇ ಅವರ ಕೆಲಸ’ ಎಂದು ಕುಟುಕಿದರು.
‘ಕಚೇರಿ ಬಳಿ ವಿಶೇಷ ಪೊಲೀಸ್ ದಳದ ಭದ್ರತೆ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ವಿಶೇಷ ಭದ್ರತೆ ಕೇಳಿಲ್ಲ. ಗೃಹ ಇಲಾಖೆಯಿಂದ ಜಿಲ್ಲಾ ಪೊಲೀಸರಿಗೆ ಆದೇಶ ಬಂದಿರಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.