ADVERTISEMENT

ಕುಮಾರಸ್ವಾಮಿ ಹೇಳಿಕೆ ಅಭಿನಂದನೀಯ: ಬಿ.ವೈ.ರಾಘವೇಂದ್ರ

ವಿಐಎಸ್‌ಎಲ್ ಕಾರ್ಖಾನೆ ಪುನಃಶ್ಚೇತನ

​ಪ್ರಜಾವಾಣಿ ವಾರ್ತೆ
Published 24 ಮೇ 2025, 16:01 IST
Last Updated 24 ಮೇ 2025, 16:01 IST
<div class="paragraphs"><p>ಬಿ.ವೈ.ರಾಘವೇಂದ್ರ</p></div>

ಬಿ.ವೈ.ರಾಘವೇಂದ್ರ

   

ಶಿವಮೊಗ್ಗ: ಜಿಲ್ಲೆಯ ಕೈಗಾರಿಕೆಗಳಲ್ಲಿ ಒಂದಾದ ವಿಐಎಸ್‌ಎಲ್ ಕಾರ್ಖಾನೆಯನ್ನು ಪುನರ್ ಆರಂಭಿಸುವ ನಿಟ್ಟಿನಲ್ಲಿ ₹ 10,000 ಕೋಟಿ ಹೂಡಿಕೆ ಮಾಡುವುದಾಗಿ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಅಭಿನಂದನೀಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಇಚ್ಛಾಶಕ್ತಿ ಅನ್ವಯ ಕಾರ್ಖಾನೆ ಪುನರುಜ್ಜೀವನಗೊಳ್ಳುತ್ತಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ತವರು ಜಿಲ್ಲೆಯ ಕಾರ್ಖಾನೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿದ್ದರು. ಅದು ಈಗ ಸಾಕಾರಗೊಂಡಿದೆ’ ಎಂದು  ತಿಳಿಸಿದರು.

ADVERTISEMENT

‘ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಈ ಕಾರ್ಖಾನೆ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಿತ್ತು. ಇಂತಹ ಕಾರ್ಖಾನೆ ತಾಂತ್ರಿಕ ಕಾರಣಗಳಿಂದಾಗಿ ತನ್ನ ಶಕ್ತಿಯನ್ನು ಕಳೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಂಸದರಾದ ದಿನದಿಂದಲೂ ನಿರಂತರವಾಗಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿದ ಪರಿಣಾಮ ಅದು ಈಗ ಸಾಕಾರಗೊಳ್ಳುತ್ತಿದೆ’ ಎಂದು ಹೇಳಿದರು.

‘ಭದ್ರಾವತಿಯಿಂದ ಚಿತ್ರದುರ್ಗ, ಚಿಕ್ಕಜಾಜೂರು ರೈಲ್ವೇ ಮಾರ್ಗಕ್ಕೆ ಮಂಜೂರಾತಿ ಪಡೆದುಕೊಂಡಿರುವುದು ಕಾರ್ಖಾನೆಗೆ ಬಲ ಬಂದಂತಾಗಿದೆ. ಇದರಿಂದ ಕಾರ್ಖಾನೆಗೆ ಅದಿರನ್ನು ಸುಲಭವಾಗಿ ಪೂರೈಸಬಹುದಾಗಿದೆ. ಸಾವಿರಾರು ಕಾರ್ಮಿಕರ ಪ್ರಾರ್ಥನೆ ನಾಡಿನ ವಿವಿಧ ಮಠಾಧೀಶರರ ಪ್ರಯತ್ನ, ಸಲಹೆ, ಸಹಕಾರ ಹಾಗೂ ಆಶೀರ್ವಾದ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಒತ್ತಾಯ, ಅಭಿಪ್ರಾಯದ ಮೇರೆಗೆ ಸಂಸದನಾಗಿ ನಮ್ಮ ಪ್ರಯತ್ನ ಫಲ ಕೊಡುವಂತಾಗಿದೆ. ಇದಕ್ಕೆ ಕ್ಷೇತ್ರದ ಜನರ ಆಶೀರ್ವಾದವೇ ಕಾರಣ’ ಎಂದು ರಾಘವೇಂದ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.