ADVERTISEMENT

ಶಿಕಾರಿಪುರದ ಭ್ರಾಂತೇಶ ಉದ್ಯಾನ: ತಾಂತ್ರಿಕ ತೊಂದರೆಯಿಂದ ಮುದ ನೀಡದ ಸಂಗೀತ ಕಾರಂಜಿ

ಎಚ್.ಎಸ್.ರಘು
Published 8 ಏಪ್ರಿಲ್ 2022, 4:13 IST
Last Updated 8 ಏಪ್ರಿಲ್ 2022, 4:13 IST
ಶಿಕಾರಿಪುರದ ಭ್ರಾಂತೇಶ ಉದ್ಯಾನದಲ್ಲಿ ಸ್ಥಗಿತವಾದ ಸಂಗೀತ ಕಾರಂಜಿ
ಶಿಕಾರಿಪುರದ ಭ್ರಾಂತೇಶ ಉದ್ಯಾನದಲ್ಲಿ ಸ್ಥಗಿತವಾದ ಸಂಗೀತ ಕಾರಂಜಿ   

ಶಿಕಾರಿಪುರ: ಪಟ್ಟಣದ ಹುಚ್ಚರಾಯಸ್ವಾಮಿ ಕೆರೆ ಪಕ್ಕದ ಭ್ರಾಂತೇಶ ಉದ್ಯಾನದಲ್ಲಿನ ಸಂಗೀತ ಕಾರಂಜಿ ಸ್ಥಗಿತವಾಗಿದ್ದು, ಉದ್ಯಾನಕ್ಕೆ ಭೇಟಿ ನೀಡುವವರಲ್ಲಿ ನಿರಾಶೆ ಮೂಡಿಸಿದೆ.

ಹುಚ್ಚರಾಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಹುಚ್ಚರಾಯಸ್ವಾಮಿ ಕೆರೆ ಅಭಿವೃದ್ಧಿ ಪಡಿಸಿ, ಭ್ರಾಂತೇಶ ಉದ್ಯಾನ ನಿರ್ಮಿಸಲಾಗಿದೆ. ಈ ಉದ್ಯಾನ ಪ್ರಸ್ತುತ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ರಾಜ್ಯದ ವಿವಿಧ ಜಿಲ್ಲೆಯ ಭಕ್ತರು, ಪ್ರವಾಸಿಗರು ಭ್ರಾಂತೇಶ ಉದ್ಯಾನಕ್ಕೆ ಭೇಟಿ ನೀಡದೇ ಹಿಂತಿರುಗುವುದಿಲ್ಲ.

2011ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹುಚ್ಚರಾಯಸ್ವಾಮಿ ದೇವಸ್ಥಾನ ಅಭಿವೃದ್ಧಿ ಜತೆ ಹುಚ್ಚರಾಯಸ್ವಾಮಿ ಕೆರೆಗೆ ಹೊಂದಿಕೊಂಡ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗಿತ್ತು. ಉದ್ಯಾನದಲ್ಲಿ ದೊಡ್ಡ ಗಾತ್ರದ ಶಿವನ ಮೂರ್ತಿ ಪ್ರಮುಖ ಆಕರ್ಷಣೆಯಾದರೆ. ಇದರ ಜತೆ ಪ್ರವಾಸಿಗರನ್ನು ಪ್ರಮುಖವಾಗಿ ಆಕರ್ಷಿಸುವುದು ಉದ್ಯಾನದ ಸಂಗೀತ ಕಾರಂಜಿ. ಆದರೆ ಈಗ ಸಂಗೀತದ ಇಂಪು ಕೇಳುತ್ತಿಲ್ಲ.

ADVERTISEMENT

ಕೆರೆಯ ಸುತ್ತಲೂ 2.5 ಕಿ.ಮೀ. ವ್ಯಾಪ್ತಿಯಲ್ಲಿ ವಾಯುವಿಹಾರಿಗಳಿಗೆ ವಾಕಿಂಗ್ ಪಾಥ್ ನಿರ್ಮಿಸಲಾಗಿದೆ.ಉದ್ಯಾನ ಪ್ರಾರಂಭವಾಗಿ 11 ವರ್ಷ ಕಳೆದಿದೆ. ನೀರಾವರಿ ಇಲಾಖೆಗೆ ಕಾರಂಜಿ ನಿರ್ವಹಣೆ ವಹಿಸಲಾಗಿದೆ. ಮೊದಲು ವಾರ ಪೂರ್ತಿ ಸಂಗೀತ ಕಾರಂಜಿ ಪ್ರದರ್ಶನ ನಡೆಯುತ್ತಿತ್ತು. ನಂತರ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ. ಉದ್ಯಾನ ನಿರ್ವಹಣೆಗೆ ಯಾವುದೇ ಅನುದಾನ ಬರುತ್ತಿಲ್ಲ ಎಂಬ ಕಾರಣಕ್ಕಾಗಿ ವಾರಾಂತ್ಯದಲ್ಲಿ ಸಂಗೀತ ಕಾರಂಜಿ ಪ್ರದರ್ಶನ ನಡೆಸಲಾಗುತ್ತಿತ್ತು. ಆದರೆ ಅದೂ ಸ್ಥಗಿತವಾಗಿದೆ.

ಏಪ್ರಿಲ್‌ 15, 16ರಂದು ಹುಚ್ಚರಾಯಸ್ವಾಮಿ ದೇವರ ಜಾತ್ರಾ ಮಹೋತ್ಸವವಿದ್ದು, ಜಾತ್ರೆ ಆರಂಭವಾಗುವ ಮುನ್ನ ಸ್ಥಗಿತಗೊಂಡ ಸಂಗೀತ ಕಾರಂಜಿ ಪ್ರದರ್ಶನ ಆರಂಭವಾಗುವುದೇ ಎಂಬ ನಿರೀಕ್ಷೆ ಸ್ಥಳೀಯರದ್ದು.

ವಾರಕ್ಕೊಮ್ಮೆ ಮಾತ್ರ ಪ್ರದರ್ಶನ ಕಾಣುತ್ತಿದ್ದ ಸಂಗೀತ ಕಾರಂಜಿ ತಾಂತ್ರಿಕ ತೊಂದರೆಯಿಂದ ಸ್ಥಗಿತವಾಗಿದೆ. ತಿಂಗಳು ಕಳೆದರೂ ಉದ್ಯಾನ ನಿರ್ವಹಣೆ ಮಾಡುತ್ತಿರುವ ನೀರಾವರಿ ಇಲಾಖೆ ಅಧಿಕಾರಿಗಳು ಸಂಗೀತ ಕಾರಂಜಿ ತಾಂತ್ರಿಕ ತೊಂದರೆಯನ್ನು ಸರಿಪಡಿಸಲು ಮುಂದಾಗದಿರುವುದು ಬೇಸರದ ಸಂಗತಿ ಎಂದು ಸಮಾಜ ಸೇವಕ ಪ್ರಕಾಶ್ ದೂರುತ್ತಾರೆ.

***

ತಾಂತ್ರಿಕ ತೊಂದರೆ ಸರಿಪಡಿಸಲು ಆಗತ್ಯ ತಂತ್ರಜ್ಞರನ್ನು ಬೆಂಗಳೂರಿನಿಂದ ಕರೆಸುತ್ತಿದ್ದೇವೆ. ಹುಚ್ಚರಾಯಸ್ವಾಮಿ ಜಾತ್ರೆ ಆರಂಭವಾಗುವ ಮುನ್ನ ಸಂಗೀತ ಕಾರಂಜಿ ಸರಿಪಡಿಸಲಾಗುವುದು.

- ಸವಿತಾ, ಸಹಾಯಕ ಎಂಜಿನಿಯರ್, ನೀರಾವರಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.