ತೀರ್ಥಹಳ್ಳಿ: ಮಕ್ಕಳು ಜಾಗತಿಕ ಸ್ಪರ್ಧೆಗೆ ತಯಾರಿ ನಡೆಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಅಂತರರಾಷ್ಟ್ರೀಯ ಮಟ್ಟದ ಕಲಿಕೆಯ ಮಾದರಿ, ಅಧ್ಯಯನ ಕ್ರಮ ಹೊಸ ಪೀಳಿಗೆಗೆ ಸಹಕಾರಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಗ್ರಾಮೀಣ ಸಾಕ್ಷಾರ್ಥ ಮಿಷನ್ ಯೋಜನೆಯಡಿ 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಶುಕ್ರವಾರ ಸ್ವೆಟರ್ ಮತ್ತು ಬ್ಯಾಗ್ ವಿತರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎನ್ಇಪಿ ಜಾರಿಗೆ ಹಿಂದೇಟು ಹಾಕುತ್ತಿರುವ ಅಸಲಿ ಕಾರಣ ತಿಳಿಯುತ್ತಿಲ್ಲ ಎಂದರು.
ಜಿಲ್ಲೆಯನ್ನು ಶೈಕ್ಷಣಿಕ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಲವಾರು ಹೊಸ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ವಿಮಾನ ನಿಲ್ದಾಣದಲ್ಲಿ ಏವಿಯೇಷನ್ ತರಗತಿ ನಡೆಸಲು ಅನುಮತಿ ಕೇಳಲಾಗಿದೆ. ಮೆಡಿಕಲ್, ಆಯುಷ್ ಕಾಲೇಜು, ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ ಎಂದರು.
‘ಜಿಲ್ಲೆಯಲ್ಲಿ 1 ಲಕ್ಷ ಬ್ಯಾಗ್, ಸ್ವೆಟರ್ ವಿತರಣೆ ಮಾಡಲಾಗುತ್ತಿದೆ. ಸಂಸದರು ಇಂತಹ ಯೋಜನೆಗಳನ್ನು ಕೇಂದ್ರದಿಂದ ತಂದು ಕ್ಷೇತ್ರವನ್ನು ಸಮೃದ್ಧಗೊಳಿಸುತ್ತಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ಸಿಗದಿದ್ದರೆ ಗ್ರಾಮೀಣ ಶಾಲೆಗಳು ಮುಚ್ಚಲಿವೆ. ಕೆಲವು ಶಾಲೆಗಳು ಸ್ಮಾರಕ ಆಗಿವೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಬಿಇಒ ವೈ.ಗಣೇಶ್ ಇದ್ದರು.
ಶಿವಮೊಗ್ಗಕ್ಕೆ ರೈಲ್ವೆ ಡಿಪೊ
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಿಲ್ಲೆಗೆ 40 ಎಕರೆ ರೈಲ್ವೆ ಡಿಪೋಗೆ ಜಾಗ ಮಂಜೂರು ಮಾಡಿದ್ದರು. ಅದನ್ನು ಹಿಡಿದುಕೊಂಡು ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸಿದ್ದೇನೆ. ಒಂದು ಹಂತದ ಸಮೀಕ್ಷೆ ನಡೆದಿದ್ದು ಡಿಪೋಗೆ ಅನುಮತಿ ಸಿಕ್ಕಿದೆ. ರೈಲು 3 ಸಾವಿರ ಕಿ.ಮೀ. ಚಲಾಯನ ಮಾಡಿದ ನಂತರ ಡಿಪೋದಲ್ಲಿ ಒಂದು ಹಂತದ ಸರ್ವೀಸ್ ನಡೆಯುತ್ತದೆ. ಅದನ್ನು ಈಗ ಮೈಸೂರು ಬೆಂಗಳೂರು ಹುಬ್ಬಳ್ಳಿಯಲ್ಲಿ ಮಾಡಲಾಗುತ್ತಿದ್ದು ಪ್ರಸ್ತಾವ ಪೂರ್ಣಗೊಂಡರೆ ನಾಲ್ಕನೇ ಡಿಪೋ ಶಿವಮೊಗ್ಗಕ್ಕೆ ಸಿಗಲಿದೆ. ಆಗುಂಬೆ ಘಾಟಿ ಸುರಂಗ ಮಾರ್ಗದ ಜೊತೆಗೆ ರೈಲ್ವೆ ಮಾರ್ಗಕ್ಕೂ ಸಮೀಕ್ಷೆ ನಡೆದಿದೆ. ಇದಲ್ಲದೇ ಅರಸಾಳು ಚಿಕ್ಕಮಗಳೂರು ರಂಭಾಪುರಿ ಪೀಠದ ಮಾರ್ಗದ ಸರ್ವೆ ನಡೆದಿದೆ. ತಾಳಗುಪ್ಪದಿಂದ ಹೊನ್ನಾವರ ಹುಬ್ಬಳಿಗೆ ಸರ್ವೆ ನಡೆಸಿದ್ದೇವೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.