ಶಿವಮೊಗ್ಗ: ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿ ಆಗಿ ಡಾ.ಆರ್.ಸಿ.ಜಗದೀಶ ಅವರನ್ನು ನೇಮಕ ಮಾಡಿ ಮಂಗಳವಾರ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಡಾ. ಜಗದೀಶ ಮೂಲತಃ ಶಿವಮೊಗ್ಗ ತಾಲ್ಲೂಕಿನ ಮೇಲಿನ ಹನಸವಾಡಿ ಗ್ರಾಮದವರು. ಸದ್ಯ ಇಲ್ಲಿನ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಭಾಗದ ಡೀನ್ ಹಾಗೂ ಆವರಣ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು.
ಅವರು ಈ ಹಿಂದೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿ, ಆಡಳಿತಾಧಿಕಾರಿಯಾಗಿ, ಬೀಜ ಕೇಂದ್ರದ ವಿಶೇಷಾಧಿಕಾರಿಯಾಗಿ, ಗ್ರಂಥಪಾಲಕರಾಗಿ, ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆಗಿ ಕೆಲಸ ಮಾಡಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ (ಕೃಷಿ) ಮುಗಿಸಿರುವ ಡಾ.ಜಗದೀಶ, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿಯಲ್ಲಿ ಪಿಎಚ್ಡಿ ಪಡೆದಿದ್ದಾರೆ. ಸಸ್ಯ ತಳಿ ಸಂರಕ್ಷಣೆ ಬಗ್ಗೆ ನೆದರ್ಲ್ಯಾಂಡ್ನಲ್ಲಿ ಅಧ್ಯಯನ ನಡೆಸಿದ್ದು, ಸಸ್ಯ ತಳಿ ಸಂಶೋಧಕರಾಗಿ ಸೋಯಾ ಬೀನ್, ತೃಣ ಧಾನ್ಯಗಳ ತಳಿ, ಮೆಣಸಿನಕಾಯಿ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.