ADVERTISEMENT

ಸಾಗರ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್‌ಗೆ ಬಂಡಾಯದ ಭೀತಿ

ಹಾಲಿ ಶಾಸಕ ಹಾಲಪ್ಪ, ಮಾಜಿ ಶಾಸಕ ಬೇಳೂರು ಕಾರ್ಯಶೈಲಿಗೆ ಸ್ವಪಕ್ಷೀಯರಿಂದಲೇ ಆಕ್ಷೇಪ

ಎಂ.ರಾಘವೇಂದ್ರ
Published 22 ಮಾರ್ಚ್ 2023, 6:19 IST
Last Updated 22 ಮಾರ್ಚ್ 2023, 6:19 IST
ಎಚ್. ಹಾಲಪ್ಪ
ಎಚ್. ಹಾಲಪ್ಪ   

ಸಾಗರ: ವಿಧಾನಸಭೆ ಚುನಾವಣೆ ಸಮೀಪಿಸಿದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ವಲಯದಲ್ಲಿ ಭಿನ್ನಮತೀಯ ಚಟುವಟಿಕೆಗಳು ಚುರುಕಾಗಿದೆ. ಇದರಿಂದಾಗಿ ಎರಡೂ ಪಕ್ಷಗಳಿಗೆ ಬಂಡಾಯದ ಭೀತಿ ಎದುರಾಗಿದೆ.

ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಬೆಳವಣಿಗೆಯೇ ಬಂಡಾಯಕ್ಕೆ ಕಾರಣವಾಗಿದೆ.

ಶಿಕಾರಿಪುರದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿರುವ ಬಿಜೆಪಿಯ ಕೆಲವು ಮುಖಂಡರು ‘ಯಾವುದೇ ಕಾರಣಕ್ಕೂ ಹಾಲಪ್ಪ ಅವರಿಗೆ ಟಿಕೆಟ್ ನೀಡಬಾರದು’ ಎಂಬ ಮನವಿ ಸಲ್ಲಿಸಿದ್ದಾಗಿ ತಿಳಿದುಬಂದಿದೆ.

ADVERTISEMENT

ಹೀಗೆ ಮನವಿ ಸಲ್ಲಿಸಿ ಬಂದ ನಂತರ ಸಾಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಸಭೆಯಲ್ಲಿ ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಅವರು ತಮ್ಮ ಭಾಷಣದಲ್ಲಿ ಹಾಲಪ್ಪ ಅವರೇ ಬಿಜೆಪಿ ಅಭ್ಯರ್ಥಿ ಎಂದು ಸೂಚ್ಯವಾಗಿ ಹೇಳಿರುವುದು ವಿರೋಧಿಗಳಿಗೆ ಸಂಕಟ ತಂದಿದೆ.

ಈ ಕಾರಣದಿಂದಲೇ ಯಾತ್ರೆಯ ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಾಲಪ್ಪ ಅವರಿಗೆ ಟಿಕೆಟ್ ನೀಡದಂತೆ ಮನವೊಲಿಸುವ ಕೆಲಸವನನು ಮತ್ತೊಮ್ಮೆ ನಡೆಸಲಾಗುತ್ತಿದೆ. ಈ ನಡುವೆ
ಮಾರ್ಚ್‌ 19ರಂದು ತಾಲ್ಲೂಕಿನ ವರದಾಮೂಲ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಬಹಿರಂಗ ಸಭೆ ನಡೆಸಿ ಹಾಲಪ್ಪ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ.

ಕುತೂಹಲದ ಸಂಗತಿಯೆಂದರೆ, ವರದಾಮೂಲದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆದ ದಿನವೇ ಸಾಗರದ ಕಾಗೋಡು ತಿಮ್ಮಪ್ಪ ರಂಗ ಮಂದಿರದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯೂ ನಡೆದಿದೆ. ಈ ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್‌ನ ಪ್ರಮುಖರು ಯಾವುದೇ ಕಾರಣಕ್ಕೂ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಬಾರದು ಎಂದು ಕಾಗೋಡು ತಿಮ್ಮಪ್ಪ ಅವರಿಗೆ ತಾಕೀತು ಮಾಡಿದ್ದಾರೆ.

ಹೀಗೆ ಏಕಕಾಲದಲ್ಲಿ ಹಾಲಪ್ಪ ಮತ್ತು ಗೋಪಾಲಕೃಷ್ಣ ಅವರ ಸ್ಪರ್ಧೆಗೆ ಸ್ವಪಕ್ಷೀಯರಿಂದಲೇ
ಅಪಸ್ವರ ಕೇಳಿ ಬರುತ್ತಿರುವುದು ವಿಶೇಷ.

ಟಿಕೆಟ್ ನೀಡದಂತೆ ಸಿದ್ದರಾಮಯ್ಯಗೆ ಮನವಿ

ಕಾಂಗ್ರೆಸ್ ಪ್ರಮುಖರು ಮಂಗಳವಾರ ಬೆಂಗಳೂರಿಗೆ ತೆರಳಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ, ಕಾಗೋಡು ತಿಮ್ಮಪ್ಪ, ಬಿ.ಆರ್. ಜಯಂತ್, ಡಾ.ರಾಜನಂದಿನಿ ಕಾಗೋಡು, ಕಲಗೋಡು ರತ್ನಾಕರ್, ಹೊನಗೋಡು ರತ್ನಾಕರ್ ಅವರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಬೇಳೂರ್‌ಗೆ ಟಿಕೆಟ್ ನೀಡಿದರೆ ಪಕ್ಷ ಸಂಘಟನೆ ಅಸಾಧ್ಯ ಎಂದು ದೂರಿದ್ದಾಗಿ ತಿಳಿದುಬಂದಿದೆ.

‘ಪಕ್ಷ ಅಂದ ಮೇಲೆ ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕು ಇದೆ. ಸಾಗರದಿಂದ ಯಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೂ ನಾನು ಅವರ ಪರ ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಕೊಡಬಾರದೆಂದು ಕೆಲವರು ಒತ್ತಾಯಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಬೇಳೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.