ADVERTISEMENT

ಪ್ರಭಾವಿ ರಾಜಕಾರಣಿಗಳ ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:25 IST
Last Updated 24 ಸೆಪ್ಟೆಂಬರ್ 2024, 15:25 IST
ರಿಪ್ಪನ್‌ಪೇಟೆ ಸಮೀಪದ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳೊಂದಿಗೆ ಚರ್ಚಿಸಿದರು
ರಿಪ್ಪನ್‌ಪೇಟೆ ಸಮೀಪದ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳೊಂದಿಗೆ ಚರ್ಚಿಸಿದರು   

ರಿಪ್ಪನ್‌ಪೇಟೆ: ಮುಳುಗಡೆ ಸಂತ್ರಸ್ತರನ್ನು ಒಕ್ಕಲೆಬ್ಬಿಸುವುದಕ್ಕೂ ಮೊದಲು ಪ್ರಭಾವಿ ರಾಜಕಾರಣಿಗಳ ನೂರಾರು ಎಕರೆ ಒತ್ತುವರಿ ಜಾಗವನ್ನು ಅಧಿಕಾರಿಗಳು ತೆರವುಗೊಳಿಸಲಿ ಎಂದು ಮುಳುಗಡೆ ಸಂತ್ರಸ್ತರು ಆಗ್ರಹಿಸಿದರು.

ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್‌ಹುಕುಂ ರೈತರ ಸಮಸ್ಯೆ ಆಲಿಸಲು ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಗ್ರಾಮಸ್ಥರು ಸರ್ಕಾರದ ವಿರುದ್ಧ ಹರಿಹಾಯ್ದರು.

ರಾಜ್ಯಕ್ಕೆ ಬೆಳಕು ನೀಡಲು ದಶಕಗಳ ಹಿಂದೆ ಮನೆ, ಮಠ ಕಳೆದುಕೊಂಡು ಅತಂತ್ರ ಬದುಕು ನಡೆಸುತ್ತಿದ್ದೇವೆ. ಜೀವನೋಪಾಯಕ್ಕಾಗಿ ಸಣ್ಣ ಪುಟ್ಟ ಒತ್ತುವರಿ ಮಾಡಿಕೊಂಡರೆ ತಪ್ಪೇನು ಎಂದು ಸಭೆಯಲ್ಲಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ರೈತರ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಲು ಶ್ರೇಷ್ಠ ವಕೀಲರನ್ನು ನೇಮಿಸಲಾಗಿದೆ ಎಂದರು.

ವನ್ಯಜೀವಿಗೆ ಮೀಸಲಿಟ್ಟ ಅರಣ್ಯದಲ್ಲಿ ಒತ್ತುವರಿಗೆ ಇಲಾಖೆ ಅವಕಾಶ ನೀಡುವುದಿಲ್ಲ. ಕಾಡು ಪ್ರಾಣಿಗಳ ರಕ್ಷಣೆ ಎಲ್ಲರ ಹೊಣೆ ಎಂದು
ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟಗಾರ ತಿಳಿಸಿದರು.

ADVERTISEMENT

ಎಸಿಎಫ್ ಸುರೇಶ್, ಮುಗುಡ್ತಿ ವನ್ಯಜೀವಿ ವಿಭಾಗದ ಆರ್‌ಎಫ್‌ ಪವನ್ ಕುಮಾರ್, ಮುಖಂಡರಾದ ಕಲಗೋಡು ರತ್ನಾಕರ, ರಾಮಚಂದ್ರ, ಬುಕ್ಕಿವರೆ ದೇವೇಂದ್ರಪ್ಪ ಗೌಡ, ಕಾನುಗೊಡು ಉಮಾಕರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.