ಶಿವಮೊಗ್ಗ: ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ನಗರದಲ್ಲಿ ಭಾನುವಾರ ಸೈಕಲ್ ಜಾಥಾ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸೈಕಲ್ ಜಾಥಾ ಉದ್ಘಾಟಿಸಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ‘ಸೈಕಲ್ ಬಳಸುವುದರಿಂದ ನಮ್ಮ ದೇಹದ ಪ್ರತಿಯೊಂದು ಭಾಗ ಆರೋಗ್ಯವಾಗಿರುತ್ತದೆ. ಪರಿಸರಕ್ಕೆ ಪೂರಕವಾಗಿರುವ ಸೈಕಲ್ ಬಳಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ’ ಎಂದು ಹೇಳಿದರು.
‘ಶಿವಮೊಗ್ಗ ಸೈಕಲ್ ಕ್ಲಬ್ನ 156ನೇ ಕಾರ್ಯಕ್ರಮ ಇದಾಗಿದ್ದು, ಸಕ್ರಿಯವಾಗಿ ನಗರದಲ್ಲಿ ಸೈಕಲ್ ಬಳಕೆ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕ್ಲಬ್ನ ಕಾರ್ಯ ಶ್ಲಾಘನೀಯ. ಈ ವೇಳೆ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಸಮಾಜಕ್ಕೆ ಉತ್ತಮ ಕೊಡುಗೆ’ ಎಂದು ಶ್ಲಾಘಿಸಿದರು.
ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ‘ನಗರದ ನಾಗರಿಕರ ಸಹಕಾರದಿಂದ ಸಂದರ್ಭಕ್ಕೆ ಅನುಕೂಲವಾಗುವ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ವರ್ಷದಲ್ಲಿ ಎರಡು ಬಾರಿ ಮೇ ಮತ್ತು ನವೆಂಬರ್ ಒಂದರಂದು ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ’ ಎಂದು ಹೇಳಿದರು.
ಪದಾಧಿಕಾರಿಗಳಾದ ಗಿರೀಶ್ ಕಾಮತ್, ನರಸಿಂಹಮೂರ್ತಿ, ಮಹಮ್ಮದ್ ರಫಿ, ವಿಜಯಕುಮಾರ್, ಹರೀಶ್ ಪಾಟೀಲ್, ವಾಗೇಶ್, ಸಾಹಸ ಅಕಾಡೆಮಿಯ ವಿಜಯೇಂದ್ರ ರಾವ್, ರಕ್ತದಾನಿ ಧರಣೇಂದ್ರ ದಿನಕರ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.