ಸಾಗರ: ‘ಧರ್ಮದ ಶಕ್ತಿಯನ್ನು ಯಾರಿಂದಲೂ ನಾಶಗೊಳಿಸಲು ಸಾಧ್ಯವಿಲ್ಲ. ಧರ್ಮವನ್ನು ಯಾರಾದರೂ ನಾಶ ಮಾಡಲು ಮುಂದಾದರೆ ಅವರೇ ನಾಶವಾಗುತ್ತಾರೆ’ ಎಂದು ರಂಭಾಪುರಿ ಮಠದ ಪ್ರಸನ್ನ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲ್ಲೂಕು ಘಟಕ ಶುಕ್ರವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ‘ವಿಶ್ವ ಬಂಧುತ್ವದ ಆದರ್ಶ ಮೌಲ್ಯ ಹೊಂದಿರುವುದು ವೀರಶೈವ ಲಿಂಗಾಯಿತ ಸಮಾಜದ ವಿಶೇಷವಾಗಿದೆ’ ಎಂದರು.
‘ವೀರಶೈವ ಎಂದರೆ ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಅದಕ್ಕೆ ಧರ್ಮ, ಸಮುದಾಯದ ವಿಶಾಲವಾದ ತಳಹದಿ ಇದೆ.ಮಠ ಮಾನ್ಯಗಳ ದಾಸೋಹ ಪರಂಪರೆಯಿಂದ ವೀರಶೈವ ಸಮಾಜದ ಘನತೆ ಹೆಚ್ಚಿದೆ’ ಎಂದುಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
‘ನೋವು ಮಾನವ ಕುಲದ ಮಹಾಗುರು ಎಂಬ ಸಂದೇಶವನ್ನು ರಂಭಾಪುರಿ ಪೀಠ ಸತತವಾಗಿ ಸಾರುತ್ತಿದೆ. ಧರ್ಮದ ಜೊತೆ ಕೃಷಿ, ಸಂಸ್ಕೃತಿ, ಸಮುದಾಯದ ಏಳಿಗೆಗಾಗಿ ಈ ಮಠವು ನಿರಂತರಾವಾಗಿ ಶ್ರಮಿಸುತ್ತಿದೆ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.
ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸಂಗಮೇಶ್ವರ, ಮೂಲೆಗದ್ದೆ ಸದಾಶಿವ ಶಿವಯೋಗ ಆಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಶೇಖರಪ್ಪ ಗೌಡ್ರು ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಟಿ.ಡಿ.ಮೇಘರಾಜ್, ಶ್ರೀಪಾದ ಹೆಗಡೆ ನಿಸರಾಣಿ, ಕೆ.ಎಚ್. ಜ್ಞಾನೇಶ್ವರ್, ಚನ್ನವೀರಪ್ಪ ಗೌಡ, ದಿನೇಶ್ ಬರದವಳ್ಳಿ, ಬಿ.ಎ.ಇಂದೂಧರ ಗೌಡ, ಸಿದ್ದಲಿಂಗೇಶ್ ಇದ್ದರು.
ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು. ವಿರೇಶ್ ಸೆಡ್ಡಿಕೊಪ್ಪ ಸ್ವಾಗತಿಸಿದರು. ಕೆ.ವಿ.ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.