ADVERTISEMENT

ವಿಭಿನ್ನ ರಕ್ತದ ಗುಂಪಿನ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಯಶಸ್ವಿ

ಎನ್‌ಯು ಆಸ್ಪತ್ರೆ: 65 ವರ್ಷದ ಅಜ್ಜಿಯಿಂದ 21 ವರ್ಷದ ಮೊಮ್ಮಗಳಿಗೆ ಕಿಡ್ನಿ ದಾನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 15:23 IST
Last Updated 31 ಜುಲೈ 2024, 15:23 IST

ಶಿವಮೊಗ: ಶಿವಮೊಗ್ಗದ ಎನ್‌ಯು ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ರಕ್ತದ ಗುಂಪಿನ ವ್ಯಕ್ತಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟ್ (ಮೂತ್ರಪಿಂಡ ಕಸಿ) ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರವೀಣ್ ಮಾಳವದೆ ಹೇಳಿದರು.

ಇಲ್ಲಿನ ಮಾಚೇನಹಳ್ಳಿಯಲ್ಲಿರುವ ಎನ್‌ಯು ಆಸ್ಪತ್ರೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಭಿನ್ನ ರಕ್ತದ ಗುಂಪಿನ ವ್ಯಕ್ತಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಮಹತ್ತರ ಸಾಧನೆ ಮಾಡಿದ್ದೇವೆ. ಇದು ಮಲೆನಾಡು ಭಾಗದಲ್ಲಿಯೇ ಪ್ರಥಮವಾಗಿದೆ. ಮೂತ್ರಪಿಂಡ ಸಂಬಂಧಿತ ಕಾಯಿಲೆಯ ರೋಗಿಗಳಲ್ಲಿ ಭರವಸೆ ಮೂಡಿಸಿದೆ ಎಂದರು.

65 ವರ್ಷ ವಯಸ್ಸಿನ ಅಜ್ಜಿ 21 ವರ್ಷದ ಮೊಮ್ಮಗಳಿಗೆ ತನ್ನ ಮೂತ್ರಪಿಂಡ ದಾನ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎನ್‌ಯು ಆಸ್ಪತ್ರೆಯ ಹೆಗ್ಗಳಿಕೆಯೆಂದರೆ ದಾನಿಯ ಹಾಗೂ ರೋಗಿಯ ರಕ್ತದ ಗುಂಪು ಬೇರೆ ಬೇರೆಯಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿ ನವೀನ ತಂತ್ರಜ್ಞಾನ ಬಳಸಿ ಚಿಕಿತ್ಸೆಯನ್ನು ಎನ್‌ಯು ಆಸ್ಪತ್ರೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದರು.

ADVERTISEMENT

ಯುವತಿಯು (ರೋಗಿ) ದೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ಮೇ 2023ರಲ್ಲಿ ಆಕೆಗೆ ಕಿಡ್ನಿ ಸಮಸ್ಯೆ ಇರುವುದನ್ನು ವೈದ್ಯರು ದೃಢಪಡಿಸಿದ್ದರು. ಆಕೆಗೆ 2023ರ ಡಿಸೆಂಬರ್‌ನಲ್ಲಿ ಡಯಾಲಿಸಿಸ್ ಪ್ರಕ್ರಿಯೆಯನ್ನು ವೈದ್ಯರು ಪ್ರಾರಂಭಿಸಿದ್ದಾರೆ. ರೋಗಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಇದನ್ನು ಮನಗಂಡ ಆಕೆಯ ಅಜ್ಜಿ ಕಿಡ್ನಿ ನೀಡಲು ಮುಂದಾದರು. ಅಜ್ಜಿ ಹಾಗೂ ಮೊಮ್ಮಗಳು ಇಬ್ಬರೂ ವಿಭಿನ್ನ ಗುಂ‍ಪಿನ ರಕ್ತ ಹೊಂದಿದ್ದರೂ ಕೂಡ ಹಲವಾರು ಸವಾಲುಗಳ ನಡುವೆಯೇ 2024ರ ಏಪ್ರಿಲ್‌ನಲ್ಲಿ ಚಿಕಿತ್ಸೆ ಕೈಗೊಳ್ಳಲಾಯಿತು ಎಂದು ಹೇಳಿದರು.

ಈ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಎಂ.ಜಿ.ಪ್ರದೀಪ್, ಡಾ.ಕಾರ್ತಿಕ್, ಡಾ.ಅನುಷಾ ಮತ್ತು ಆಸ್ಪತ್ರೆಯ ಸಿಬ್ಬಂದಿ ಸಹಕಾರ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಇಬ್ಬರು ಆರೋಗ್ಯವಾಗಿದ್ದಾರೆ. ಮೂತ್ರಪಿಂಡವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಶಸ್ತ್ರಚಿಕಿತ್ಸೆ ಹೊರತುಪಡಿಸಿದರೆ ಈ ಪ್ರಕರಣ ಕೌಟುಂಬಿಕ ಪ್ರೀತಿ, ಪರಸ್ಪರ ವಿಶ್ವಾಸಕ್ಕೆ ನಿದರ್ಶನವಾಗಿದೆ. ದಾನಿಗಳನ್ನು ಕೂಡ ಪ್ರೇರೆಪಿಸುತ್ತದೆ. ಎಷ್ಟೋ ಜನರು ರಕ್ತದ ಗುಂಪು ಬೇರೆಯಾದರೇ ದಾನಮಾಡಲು ಬರುವುದಿಲ್ಲ ಎಂದು ತಿಳಿದುಕೊಂಡಿದ್ದರು. ಆದರೆ ಈಗ ಅದು ಬದಲಾಗಿದೆ. ಹೊಸ ತಂತ್ರಜ್ಞಾನಗಳು ಹಲವು ಜೀವಗಳ ಉಳಿಸುತ್ತಿವೆ ಎಂದರು.

ಹೆಚ್ಚಿನ ಮಾಹಿತಿಗಾಗಿ 6364409651 ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಅರವಳಿಕೆ ತಜ್ಞ ಡಾ.ಕಾರ್ತಿಕ್, ಶಸ್ತ್ರಚಿಕಿತ್ಸಾ ತಜ್ಞ ಡಾ.ಪ್ರದೀಪ್, ಡಾ.ಅನುಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.