ಶಿವಮೊಗ್ಗ: ಅಡಿಕೆ ಸೇವನೆ ನಿಷೇಧಿಸುವ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯನ್ನು ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಖಂಡಿಸಿದೆ.
ಸಚಿವ ಮಾನ್ಸುಖ್ ಮಾಂಡವಿಯ ಅವರು ಭಾರತ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಜತೆ ಚರ್ಚಿಸಿ ಅಡಿಕೆ ಸೇವನೆ ನಿಷೇಧಿಸುವ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಅಡಿಕೆಗೆ ಕ್ಯಾನ್ಸರ್ಕಾರಕ ಹಣೆಪಟ್ಟಿ ಕಟ್ಟಲು ಹೊರಟಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಅಡಿಕೆಯ ಸಾಂಪ್ರದಾಯಿಕತೆ, ಮೌಲ್ಯ, ಪ್ರಾಚೀನತೆ ಕುರಿತು ಕೇಂದ್ರ ಸರ್ಕಾರ, ಕೋರ್ಟ್ಗೆ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ತಂಬಾಕಿನಿಂದ ಕ್ಯಾನ್ಸರ್ ಹರಡುತ್ತದೆ ಎನ್ನುವುದು ಸಾಬೀತಾಗಿದ್ದರೂ, ತಂಬಾಕು ನಿಷೇಧಿಸದ ಸರ್ಕಾರ, ಔಷಧೀಯ ಗುಣಗಳುಳ್ಳ ಅಡಿಕೆ ನಿಷೇಧಿಸಲು ಹೊರಟಿದೆ. ಸಿಗರೇಟ್ ಲಾಭಿಗೆ ಸರ್ಕಾರ ಮಣಿದಿದೆ ಎಂದು ದೂರಿದರು.
ಅಡಿಕೆ ಬೆಳೆಗಾರರರಾದ ಗುಡಮಘಟ್ಟೆ ಮಲ್ಲಯ್ಯ, ಇಕ್ಕೇರಿ ರಮೇಶ್, ದಯಾನಂದ್, ವೆಂಕಟೇಶ್, ದೇವಾನಂದ್, ನಿರಂಜನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.