ADVERTISEMENT

ಸಾಮೂಹಿಕ ಭೋಜನಕ್ಕೆ ವೈದ್ಯರು ಅನುಮತಿ ನೀಡುವುದು ಕಡ್ಡಾಯ!

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಖಡಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 6:21 IST
Last Updated 23 ನವೆಂಬರ್ 2021, 6:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಇನ್ನು ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಮಾಹಿತಿ ನೀಡಿ ಸಾಮೂಹಿಕಭೋಜನ, ಅನ್ನ ಸಂತರ್ಪಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಇದೇ ರೀತಿ ಸರ್ಕಾರಿ ಹಾಸ್ಟೆಲ್‍ಗಳು, ವೃದ್ಧಾಶ್ರಮಗಳು, ಇತರ ಸರ್ಕಾರಿ ಹಾಗೂ ಖಾಸಗಿ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನಿಂದ ಇದನ್ನು ಪಾಲಿಸಬೇಕು ಎಂದು ಆದೇಶಿಸಿದ್ದಾರೆ.

ಅಡುಗೆ ಕೋಣೆಯಲ್ಲಿ ಅಪರಿಚಿತ ಅಥವಾ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಅಡುಗೆ ಕೋಣೆಯಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಅಡುಗೆಗೆ ಬಳಸುವ ನೀರು ಶುದ್ಧವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ನೀರನ್ನು ಆರೋಗ್ಯ ಇಲಾಖೆ ಸಹಕಾರದಿಂದ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಅಡುಗೆ ಸಹಾಯಕರು, ಬಡಿಸುವವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಿ ನೇಮಕ ಮಾಡಬೇಕು. ಕೈಗವಸು ಕಡ್ಡಾಯಗೊಳಿಸಬೇಕು. ಪ್ರತಿ ಸಿಬ್ಬಂದಿಯನ್ನು 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಪಡಿಸುವುದು, ಅವರಿಗೆ ಪ್ರತಿ 6 ತಿಂಗಳಿಗೊಮ್ಮೆ ಜಂತು ಹುಳು ನಿವಾರಣಾ ಮಾತ್ರೆಯನ್ನು ನೀಡುವುದು, ಅಡುಗೆ ಭಟ್ಟರ ಮತ್ತು ಊಟ ಬಡಿಸುವವರ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಕಲ್ಯಾಣ ಮಂಟಪದ ವ್ಯವಸ್ಥಾಪಕರು ಸ್ಥಳೀಯ ಸರ್ಕಾರಿ ವೈಧ್ಯಾಧಿಕಾರಿಗಳಿಗೆ
ಮೊದಲೇ ನೀಡಬೇಕು ಎಂದು ತಿಳಿಸಿದರು.

ಸಭೆ, ಸಮಾರಂಭಗಳಿಗೆ ಪಡಿತರ ಮತ್ತು ಪ್ಯಾಕೇಜ್ ಕುಡಿಯುವ ನೀರು ಖರೀದಿಸುವಾಗ ತಯಾರಿಕೆ ದಿನಾಂಕ, ಮುಕ್ತಾಯ ದಿನಾಂಕ ಪರಿಶೀಲಿಸಬೇಕು. ಏನಾದರೂ ಅವಘಡ ಸಂಭವಿಸಿದರೆ ಪಡಿತರ, ನೀರು ಖರೀದಿಸಿದ ಬಿಲ್ ಆರೋಗ್ಯಾಧಿಕಾರಿಗಳಿಗೆ ನೀಡಬೇಕು. ಅಡುಗೆ ಮನೆಯಲ್ಲಿ ಪಾತ್ರೆ ತೊಳೆದ ನೀರು, ಕೈತೊಳೆದ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ದಾಸ್ತಾನು ಕೊಠಡಿಯನ್ನು ಸ್ವಚ್ಛವಾಗಿರಿಸಬೇಕು ಎಂದು ಸೂಚಿಸಿದ್ದಾರೆ.

ಆಹಾರ ಪದಾರ್ಥ ಸರಬರಾಜು ಸಂದರ್ಭದಲ್ಲಿ ಕಲಬೆರಕೆ ಕಂಡುಬಂದಲ್ಲಿ, ಅವುಗಳನ್ನು ಬಳಸದೆ ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಬೇಕು. ಅನ್ನ ಸಂತರ್ಪಣೆ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು. ಸೂಕ್ತ ಶೌಚಾಲಯ ವ್ಯವಸ್ಥೆ ಇರಬೇಕು. ಲಘು ಉಪಾಹಾರವನ್ನು ಮುದ್ರಿತ ಪತ್ರಿಕೆಗಳಲ್ಲಿ ವಿತರಿಸಬಾರದು.

ದೇವಸ್ಥಾನ, ಅಂಗನವಾಡಿ, ಶಾಲೆ, ವಸತಿಶಾಲೆ, ಹಾಸ್ಟೆಲ್, ಕ್ಯಾಂಟೀನ್, ಕಾರಾಗೃಹ ಮತ್ತು ಆಸ್ಪತ್ರೆ ಕ್ಯಾಂಟೀನ್‍ಗಳಲ್ಲಿನ ಅಡುಗೆ ಕೊಠಡಿ ಮತ್ತು ಊಟದ ಕೊಠಡಿಗಳಲ್ಲಿ ಈ ಎಲ್ಲ ಅಂಶಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಯಾವುದೇ ಅವಘಡಗಳು ಸಂಭವಿಸಿದರೆ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಮಾರಂಭದ ಆಯೋಜಕರನ್ನು ನೇರ ಹೊಣೆಗಾರರಾಗಿ ಮಾಡಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.