
ಸಾಗರ: ಫೋಟೋಗ್ರಫಿ ತಾಂತ್ರಿಕತೆಗಿಂತ ಹೆಚ್ಚು ಭಾವನೆಗಳಿಗೆ ಸಂಬಂಧಿಸಿದ ಕಲೆ ಆಗಿದೆ ಎಂದು ಹಿರಿಯ ಛಾಯಾಚಿತ್ರಗ್ರಾಹಕ ಗೌತಮ್ ರಮೇಶ್ ಹೇಳಿದರು.
ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಗುರುವಾರ ಸಾಗರ ಪೋಟೋಗ್ರಾಫಿಕ್ ಸೊಸೈಟಿ ಆಯೋಜಿಸಿರುವ ಛಾಯಾಚಿತ್ರಗ್ರಹಣ ಕಾರ್ಯಾಗಾರದಲ್ಲಿ ಮಾತನಾಡಿದರು.
ಫೋಟೋಕ್ಲಿಕ್ಕಿಸಲು ತಾಂತ್ರಿಕತೆಯ ಅವಶ್ಯಕತೆ ಇರುವುದು ನಿಜ. ಆದರೆ, ಕೇವಲ ತಾಂತ್ರಿಕತೆಯಿಂದಲೆ ಉತ್ತಮ ಫೋಟೋ ಹೊರಬರುವುದಿಲ್ಲ. ತಾಂತ್ರಿಕತೆಯ ಜೊತೆಗೆ ಫೋಟೋ ತೆಗೆಯುವವರ ಭಾವನೆಗಳು ಸಮ್ಮಿಳಿತಗೊಂಡಾಗ ಮಾತ್ರ ಗುಣಮಟ್ಟದ ಚಿತ್ರ ಮೂಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೆಲೆ ಬಾಳುವ ಕ್ಯಾಮೆರಾ ಕೈಯಲ್ಲಿದ್ದರೆ ಮಾತ್ರ ಒಳ್ಳೆಯ ಫೋಟೋ ತೆಗೆಯಬಹುದು ಎಂಬ ಭಾವನೆ ತಪ್ಪು. ನಮ್ಮಲ್ಲಿರುವ ಕ್ಯಾಮೆರಾದ ಶಕ್ತಿ, ಸಾಮರ್ಥ್ಯ ಹಾಗೂ ಮಿತಿಗಳ ಅರಿವು ನಮಗಿದ್ದರೆ ಉತ್ತಮ ಚಿತ್ರ ತೆಗೆಯಬಹುದು ಎಂದು ತಿಳಿಸಿದರು.
ಹವ್ಯಾಸಿ ಛಾಯಾಚಿತ್ರಗ್ರಾಹಕರಲ್ಲಿ ಕಲಾತ್ಮಕ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ಸಾಗರ ಫೋಟೋಗ್ರಾಫಿಕ್ ಸೊಸೈಟಿ ನಡೆಸುತ್ತಿರುವ ಕಾರ್ಯಾಗಾರಗಳು ಪ್ರಮುಖ ಪಾತ್ರ ವಹಿಸಿವೆ. 25 ವರ್ಷಗಳಲ್ಲಿ ಪೋಟೋಗ್ರಫಿ ಕ್ಷೇತ್ರಕ್ಕೆ ಈ ಸಂಸ್ಥೆ ನೀಡಿರುವ ಕೊಡುಗೆ ಮಹತ್ವದ್ದಾಗಿದೆ ಎಂದು ಕಾರ್ಯಾಗಾರವನ್ನು ಉದ್ಘಾಟಿಸಿದ ಸಂಸ್ಥೆ ಅಧ್ಯಕ್ಷೆ ಪಾರ್ವತಿ ರವೀಂದ್ರ ಹೇಳಿದರು.
ರಂಗಕರ್ಮಿಗಳಾದ ಕೃಷ್ಣಮೂರ್ತಿ, ಪ್ರಭಾ ಕೃಷ್ಣಮೂರ್ತಿ, ಪುರುಷೋತ್ತಮ ತಲವಾಟ, ಕಾರ್ಯಾಗಾರದ ಸಂಘಟಕರಾದ ರಾಜಾರಾಮ್ ಕೆ.ಎಸ್. ಜಿ.ಆರ್.ಪಂಡಿತ್, ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.