ತ್ಯಾಗರ್ತಿ: ‘10 ಸಾವಿರ ಜನರನ್ನು ಸೇರಿಸಿ ಕಾಗೋಡು ತಿಮ್ಮಪ್ಪ ಅವರಿಗೆ ಸನ್ಮಾನ ಮಾಡುತ್ತೇವೆ ಎಂದು ತಾಲ್ಲೂಕಿನಲ್ಲಿ ₹25 ಲಕ್ಷದಿಂದ ₹ 50 ಲಕ್ಷ ಹಣ ವಸೂಲಿ ಮಾಡಿ 250 ಜನರನ್ನೂ ಸೇರಿಸಲಾಗದೇ ಹಣ ಹೊಡೆದ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್ ಲಾವಿಗೆರೆ ವಿರುದ್ಧ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನುಗೋಡು ಗಂಭೀರ ಆರೋಪ ಮಾಡಿದರು.
ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿರೋಧ ಪಕ್ಷ ನಾಯಕನಾಗಿ ತಾಲ್ಲೂಕಿನ ಸಮಸ್ಯೆ ತಿಳಿಸಿದರೆ ಶಾಸಕರು ಉತ್ತರ ಕೊಡುವುದನ್ನು ಬಿಟ್ಟು, ತಾಲ್ಲೂಕು ಪಂಚಾಯಿತಿ ಎದುರು ಕಾಂಗ್ರೆಸ್ ಪಕ್ಷದವರಿಂದಲೇ ಸಾರ್ವಜನಿಕವಾಗಿ ಒದೆ ತಿಂದ ಲೂಟಿಕೋರನಿಂದ ಪತ್ರಿಕಾಗೋಷ್ಠಿ ಮಾಡಿಸುವುದು ಶಾಸಕರಿಗೆ ಶೋಭೆ ತರುವುದಿಲ್ಲ’ ಎಂದು ಹೇಳಿದರು.
‘ಸರ್ಕಾರಿ ಜಾಗದಲ್ಲಿ ಹತ್ತಾರು ಎಕರೆ ಅಕ್ರಮ ಕಲ್ಲು ಕೋರೆ ಮಾಡಿರುವುದು ಹಾಗೂ ಹೊಸನಗರದಲ್ಲಿ ಮಣ್ಣು ಮಿಶ್ರಿತ ಮರಳು ಮಾರಾಟ ಮಾಡಿದ್ದಕ್ಕೆ ಜನ ಅಲ್ಲಿಂದ ನಿಮ್ಮನ್ನು ಓಡಿಸಿರುವುದನ್ನು ನಾವು ಮರೆತಿಲ್ಲ’ ಎಂದು ಸೋಮಶೇಖರ್ ಲಾವಿಗೆರೆ ವಿರುದ್ಧ ವಾಗ್ದಾಳಿ ನಡೆಸಿದರು.
‘ನಾನು ರೈತರಿಂದ ಖರೀದಿಸಿದ ಶುಂಠಿಗೆ ಹಣ ನೀಡಿಲ್ಲ ಎಂದು ಆರೋಪ ಮಾಡುತ್ತಿರುವ ನೀವು ಗಣಪತಿ ದೇವಸ್ಥಾನ, ಸಿಗಂದೂರು ದೇವಸ್ಥಾನ ಇಲ್ಲವೇ ಧರ್ಮಸ್ಥಳ ದೇವಸ್ಥಾನಕ್ಕೆ ಬಂದು ಸಾಬೀತುಪಡಿಸಿದರೆ ಅಲ್ಲಿಯೇ ಹಣ ನೀಡುತ್ತೇನೆ’ ಎಂದು ಸವಾಲು ಎಸೆದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಮುಕಾಂಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭರಮಪ್ಪ, ಪ್ರಮುಖರಾದ ಬೂದ್ಯಪ್ಪ, ಗಣಪತಿ, ದೇವರಾಜ್, ರೇವಪ್ಪ ಹೊಸಕೊಪ್ಪ, ಗಂಗಾಧರ, ಧನರಾಜ್, ಚಂದ್ರು, ಗುರು ಮದ್ಲೆಸರ, ಹಿರೆಯಣ್ಯಪ್ಪ, ರವಿ, ಪ್ರಕಾಶ್, ಷಣ್ಮುಖ, ನಾಗರಾಜ್, ಶಿವು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.