ADVERTISEMENT

ಸಹ್ಯಾದ್ರಿ ಕಾಲೇಜಿನ 19 ಅಧ್ಯಾಪಕರಿಗೆ ಪ್ರೊಫೆಸರ್ ಗರಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 3:14 IST
Last Updated 27 ಆಗಸ್ಟ್ 2021, 3:14 IST
ಸಹ್ಯಾದ್ರಿ ಕಾಲೇಜು ಅಧ್ಯಾಪಕರ ಸಂಘದ ಪ್ರಮುಖರು ಬಡ್ತಿ ಆದೇಶ ಹೊರಡಿಸಿದ ಕುಲಪತಿ ವೀರಭದ್ರಪ್ಪ ಅವರನ್ನು ಗುರುವಾರ ಅಭಿನಂದಿಸಿದರು.
ಸಹ್ಯಾದ್ರಿ ಕಾಲೇಜು ಅಧ್ಯಾಪಕರ ಸಂಘದ ಪ್ರಮುಖರು ಬಡ್ತಿ ಆದೇಶ ಹೊರಡಿಸಿದ ಕುಲಪತಿ ವೀರಭದ್ರಪ್ಪ ಅವರನ್ನು ಗುರುವಾರ ಅಭಿನಂದಿಸಿದರು.   

ಶಿವಮೊಗ್ಗ: ಸಹ್ಯಾದ್ರಿ ಕಾಲೇಜಿನ 19 ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರಾಗಿ (ಪ್ರೊಫೆಸರ್) ಬಡ್ತಿ ನೀಡಿ ಕುವೆಂಪು ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.

ಸ್ನಾತಕೋತ್ತರ ಪದವಿ ಕೇಂದ್ರಗಳಿಗೆ ಸೀಮಿತವಾಗಿದ್ದ ಪ್ರೊಫೆಸರ್ ಹುದ್ದೆಗಳನ್ನು ಮೊದಲ ಬಾರಿಗೆ ಪದವಿ ಕಾಲೇಜುಗಳ ಅಧ್ಯಾಪಕರಿಗೂ ನೀಡಿದ ಶ್ರೇಯ ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಈಗ ಕುವೆಂಪು ವಿಶ್ವ ವಿದ್ಯಾಲಯ ಅಂತಹ ಹೆಜ್ಜೆ ಇಟ್ಟಿದೆ.

2018ರಲ್ಲಿ ಯುಜಿಸಿ ರೂಪಿಸಿದ 7ನೇ ಪರಿಷ್ಕೃತ ವೇತನ ಶ್ರೇಣಿ ಮಾರ್ಗಸೂಚಿಯಲ್ಲಿ ಪದವಿ ಕಾಲೇಜುಗಳ ಅರ್ಹ ಸಹ ಪ್ರಾಧ್ಯಾಪಕರಿಗೆ ಶೇ 5ರಿಂದ 10ರಷ್ಟು ಪ್ರಮಾಣದಲ್ಲಿ ಬಡ್ತಿ ನೀಡಲು ನಿಯಮಾವಳಿ ರೂಪಿಸಿತ್ತು. ನಿಯಮದಂತೆ ಶಾಸನಾತ್ಮಕ ನಿಯಮಾವಳಿ ರೂಪಿಸಿ, ರಾಜ್ಯಪಾಲರ ಒಪ್ಪಿಗೆ ಪಡೆದು ಬಡ್ತಿ ಆದೇಶ ಹೊರಡಿಸಲಾಗಿದೆ.

ADVERTISEMENT

ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಳ್ಳುತ್ತಿದ್ದವರು ತಮ್ಮ ಸೇವಾವಧಿಯಲ್ಲಿ ಸಹ ಪ್ರಾಧ್ಯಾಪಕರಾಗಿ ಬಡ್ತಿ ಪಡೆಯುತ್ತಿದ್ದರು. ಈಗ ಪದವಿ ಅಧ್ಯಾಪಕರಿಗೂ ಪ್ರೊಫೆಸರ್‌ ಹುದ್ದೆ ಅಲಂಕರಿಸುವ ಭಾಗ್ಯ ಒಲಿದು ಬಂದಿದೆ. ಸದ್ಯ ವಿಶ್ವವಿದ್ಯಾಲಯದ ಘಟಕ ಕಾಲೇಜು ಸಹ್ಯಾದ್ರಿಯ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗದ 19 ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್‌ ಹುದ್ದೆಗೆ ಬಡ್ತಿ ದೊರೆತಿದೆ. ಮುಂದೆ ಇತರೆ ಪದವಿ ಕಾಲೇಜುಗಳಿಗೂ ವಿಸ್ತರಿಸಲಾಗುವುದು ಎಂದು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾಹಿತಿ ನೀಡಿದರು.

‘ಪದವಿ ಕಾಲೇಜು ಅಧ್ಯಾಪಕರ ಬಹುದಿನಗಳ ಕನಸು ನನಸಾಗಿದೆ. ಇಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕುಲಪತಿ ಬಿ.ಪಿ.ವೀರಭದ್ರಪ್ಪ, ಕುಲಸಚಿವೆ ಅನುರಾಧಾ, ನಿಕಟಪೂರ್ವ ಕುಲಸಚಿವ ಎಸ್.ಎಸ್.ಪಾಟೀಲ್‌ ಅವರಿಗೂ ಹಾಗೂ ಸಿಂಡಿಕೇಟ್‌ ಸದಸ್ಯರು ಅಭಿನಂದನಾರ್ಹರು ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ.ಎಂ.ಎಚ್.ಪ್ರಹ್ಲಾದಪ್ಪ, ಪ್ರಮುಖರಾದ ಪ್ರೊ.ಸಿ.ಕೆ.ರಮೇಶ್, ಪ್ರೊ.ಪರಮೇಶ್ವರ ನಾಯ್ಕ, ಪ್ರೊ.ರಮೇಶ್‌ ಬಾಬು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.