ADVERTISEMENT

ಶಿವಮೊಗ್ಗ: ನಾಟಕಗಳ ಕಥೆ ಹೇಳುವ ಭಿತ್ತಿ ಚಿತ್ತಾರಗಳು

ಗಣೇಶ್ ತಮ್ಮಡಿಹಳ್ಳಿ
Published 18 ನವೆಂಬರ್ 2021, 4:25 IST
Last Updated 18 ನವೆಂಬರ್ 2021, 4:25 IST
ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಅನಾವರಣಗೊಂಡಿರುವ ಭಿತ್ತಿಚಿತ್ರಗಳ ಕಲಾಕೃತಿಗಳು.
ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಅನಾವರಣಗೊಂಡಿರುವ ಭಿತ್ತಿಚಿತ್ರಗಳ ಕಲಾಕೃತಿಗಳು.   

ಶಿವಮೊಗ್ಗ: ನಾಟಕ ಹಾಗೂ ಜಾನಪದ ಕತೆಗಳನ್ನು ಚಿತ್ರಗಳ ಮೂಲಕ ಹೇಳುವ ‘ಭಿತ್ತಿ ಚಿತ್ರ’ ಕಲೆಯು ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಅನಾವರಣಗೊಂಡಿದ್ದು, ಕಲಾರಾಧಕರ ಮನಸೆಳೆಯುತ್ತಿವೆ.

ನಾಟಕಗಳ ಅನುಗುಣವಾಗಿ ಇಡೀ ರಂಗಾಯಣವು ಪ್ರಾಕೃತಿಕ ವಾಸ್ತುಶಿಲ್ಪದ ಸೊಬಗಿನಲ್ಲಿ ಕಂಗೊಳಿಸುತ್ತಿದೆ. ಭವನದ ಪ್ರವೇಶ ದ್ವಾರದಲ್ಲಿ ಬೃಹತ್ ಮ್ಯೂರಲ್ ಆರ್ಟ್‌ಗಳುಮತ್ತು ಮುಖವಾಡಗಳು ಆಕರ್ಷಕವಾಗಿದ್ದು, ಮೊದಲ ಮಹಡಿಯ ಭಿತ್ತಿಗಳಿಗೆ ಕನ್ನಡದ ಪ್ರಮುಖ ನಾಟಕಗಳಾದ ‘ಚಾಣಕ್ಯ ಪ್ರಪಂಚ’, ‘ಸಾಹೇಬ್ರು ಬರುತ್ತಾರೆ’, ‘ಸಾಮ್ರಾಟ್ ಅಶೋಕ’, ‘ಇದಕ್ಕೆ ಕೊನೆ ಎಂದು’? ಮಾತ್ರವಲ್ಲದೆ ಜಾನಪದ ಕಲಾ ಪ್ರಕಾರವಾದ ಸೂತ್ರದ ಗೊಂಬೆಯಾಟದ ದೃಶ್ಯಾವಳಿಗಳು, ವಿವಿಧ ಕಲಾಪ್ರಕಾರಗಳು ಅನಾವರಣಗೊಂಡಿವೆ.‌

₹ 20 ಲಕ್ಷ ವೆಚ್ಚ: ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಮತ್ತು ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಮ್ಯೂರಲ್ ಆರ್ಟ್ ಗ್ಯಾಲರಿ ನಿರ್ಮಿಸಲಾಗಿದ್ದು, ಇದಕ್ಕಾಗಿ ₹ 20 ಲಕ್ಷ ಖರ್ಚು ಮಾಡಲಾಗಿದೆ. 40ಕ್ಕೂ ಹೆಚ್ಚು ಕಲಾಕೃತಿಗಳು ಅನಾವರಣಗೊಂಡಿದ್ದು, ಚಿತ್ರಕಲಾ ಪರಿಷತ್‌ನ 30ಕ್ಕೂ ಹೆಚ್ಚು ಕಲಾವಿದರು 4 ತಿಂಗಳಿಂದ ಈ ಬಗ್ಗೆ ತಯಾರಿ ನಡೆಸಿದ್ದಾರೆ.

ADVERTISEMENT

ಅಂಗವಿಕಲರಿಂದ ಮುಖವಾಡಗಳು ಸಿದ್ಧ: ‘ಭವನದ ಪ್ರವೇಶ ದ್ವಾರದಲ್ಲಿ 20ಕ್ಕೂ ಹೆಚ್ಚು ಅಂಗವಿಕಲರು ಹಾಗೂ ಮಕ್ಕಳು ಆಕರ್ಷಣೆಯ ಮುಖವಾಡಗಳನ್ನು ಮಾಡಿದ್ದಾರೆ. ಸೆಂಥಿಲ್ ಕುಮಾರ್‌ ಅವರು ಇದರ ಉಸ್ತುವಾರಿ ವಹಿಸಿಕೊಂಡು ತುಂಬ ಅಚ್ಚುಕಟ್ಟಾಗಿ ಕಲಾಕೃತಿಗಳನ್ನು ಅನಾವರಣಗೊಳಿಸಿದ್ದಾರೆ. ಸಾರ್ವ ಜನಿಕರು ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ’ ಎಂದು ರಂಗಾಯಣ ನಿರ್ದೇಶಕ ಸಂದೇಶ ಜವಳಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.