ಶಿವಮೊಗ್ಗ:ಯಾವುದೇ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವುದು ನಟರ ವೈಯಕ್ತಿಕ ವಿಚಾರ. ಆದರೆ, ವಿವಾದಕ್ಕೆ ಆಸ್ಪದ ನೀಡದಂತೆ ಹುಷಾರಾಗಿ ಮಾತನಾಡಬೇಕು ಎಂದು ನಟ ಶಿವರಾಜ್ಕುಮಾರ್ ಕಿವಿಮಾತು ಹೇಳಿದರು.
ಶಿವಮೊಗ್ಗದಲ್ಲಿ ಬುಧವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಮಂಡ್ಯ ಚುನಾವಣಾ ಪ್ರಚಾರದ ಹೇಳಿಕೆಗಳನ್ನು ಗಮನಿಸಿಲ್ಲ. ರಾಜಕೀಯ ಸುದ್ದಿಗಳನ್ನು ನೋಡುವುದೂ ಇಲ್ಲ. ಮತ್ತೊಬ್ಬರು ಹೀಗೆ ಮಾತನಾಡಬೇಕು. ಹಾಗೆ ಮಾತನಾಡಬೇಕು ಎಂದು ಸಲಹೆ ನೀಡಲು ಬಯಸುವುದೂ ಇಲ್ಲ. ಎಲ್ಲ ಪಕ್ಷಗಳಲ್ಲಿಯೂ ನನಗೆ ಉತ್ತಮ ಸ್ನೇಹಿತರು ಇದ್ದಾರೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ ಒಳ್ಳೆಯ ಮನುಷ್ಯ. ಪರೋಪಕಾರಿ. ಕಷ್ಟದಲ್ಲಿ ಇರುವವರ ಕಂಡು ಸದಾ ಮರುಗುತ್ತಾರೆ. ಉತ್ತಮ ಒಡನಾಡಿ. ಕ್ಷೇತ್ರದ ಜನರು ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕವಚ’ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾ. ದೈಹಿಕ ನ್ಯೂನತೆ ಇರುವವರನ್ನು ಕಡೆಗಣಿಸಬಾರದು ಎಂಬ ಸಂದೇಶ ಈ ಚಿತ್ರದ ಮೂಲಕ ನೀಡಲಾಗಿದೆ. ಕಮರ್ಷಿಲ್ ಚಿತ್ರವಾದರೂ, ಕಲಾತ್ಮಕ ಸ್ಪರ್ಶವಿದೆ. ಚುನಾವಣೆ ಇದ್ದರೂ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈ ಚಿತ್ರದ ನಂತರ ಇನ್ನಷ್ಟು ಸವಾಲಿನ ಪಾತ್ರ ನಿರ್ವಹಿಸಬಹುದು ಎಂಬ ಆತ್ಮವಿಶ್ವಾಸ ಮೂಡಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೀತಾ ಶಿವರಾಜ್ಕುಮಾರ್, ರಾಮಮಂದಿರ ನಿರ್ಮಾಣ, ಸರ್ಜಿಕಲ್ ಸ್ಟ್ರೈಕ್ನಂತಹ ಭಾವನಾತ್ಮಕ ವಿಚಾರಗಳನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು ಎಂದುಆಕ್ಷೇಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.