ಹೊಸನಗರ: ‘ಜನಪ್ರತಿನಿಧಿಗಳಾದ ನಾವು ನಮಗೆ ಮತ ಕೊಟ್ಟು ಆರಿಸಿ ಕಳಿಸಿದ ಮತದಾರ ಪ್ರಭುಗಳ ಸೇವಾ ಕಾರ್ಯದಲ್ಲಿ ತೊಡಗಿ ಅವರ ಋಣ ತೀರಿಸಬೇಕು’ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಗಾಯಿತ್ರಿ ಮಂದಿರದಲ್ಲಿ ಸೇವಾ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮದ ಪ್ರಯುಕ್ತ ಬಿಜೆಪಿ ವೃತ್ತಿಪರ ಪ್ರಕೋಷ್ಠ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಕೊರೊನಾ ಕಾಲದಲ್ಲಿ ಜನರು ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಆಸರೆ ನೀಡುವಂತಹ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ. ನಮ್ಮ ವೈದ್ಯರು ಶಕ್ತಿ ಮೀರಿ ಶ್ರಮಿಸಿ ಜನರ ಆರೋಗ್ಯ ಕಾಪಾಡಿದ್ದಾರೆ. ಸಮಾಜದ ಸ್ವಾಸ್ಥ ಕಾಪಾಡುವುದರಲ್ಲಿ ವೈದ್ಯರ ಸೇವೆ ದೊಡ್ಡದು. ಅವರಿಗೆ ನಾವು ಎಂದಿಗೂ ಋಣಿ ಆಗಿರಬೇಕು’
ಎಂದರು.
‘ಹೊಸನಗರ ಮತ್ತು ಸಾಗರದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕಾಡುತ್ತಿತ್ತು. ಇದೀಗ ವೈದ್ಯರ ಭರ್ತಿ ಮಾಡುವ ಕಾಯಕ ನಿರಂತರವಾಗಿದ್ದು ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರು ಇದ್ದಾರೆ. ಆದರೆ ಇಲ್ಲಿನ ಕೆಲ ರಾಜಕೀಯ ಪುಡಾರಿಗಳು ವೈದ್ಯರ ಮೇಲೆ ದೂರು ಹೇಳಿಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ವೈದ್ಯರ ಯೋಗ್ಯತೆಯ ಅರಿವಿಲ್ಲದ ಕೆಲ ಪುಡಾರಿಗಳು ವೈದ್ಯರನ್ನು ಎತ್ತಂಗಡಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ವೈದ್ಯರ ಮೇಲೆ ಗೌರವವಿರಲಿ. ಹತ್ತಾರು ವರ್ಷ ಓದಿಕೊಂಡು ವೈದ್ಯ ಪದವಿ ಮಾಡಿ ಜನರ ಸೇವೆಯಲ್ಲಿ ನಿತರರಾಗಿರುವ ವೈದ್ಯರನ್ನು ಪ್ರೀತಿಯಿಂದ ಕಾಣೋಣ. ಅವರು ಹೋದರೆ ನಮಗೆ ನಷ್ಟ. ಮತ್ತೊಬ್ಬ ವೈದ್ಯರು ಬರುವುದು ಅಷ್ಟು ಸುಲಭದ ಮಾತಲ್ಲ’ ಎಂದು ಎಚ್ಚರಿಕೆ ನೀಡಿದರು.
ಬಳಿಕ ಅಂಗವಿಕಲರಿಗೆ ಬಟ್ಟೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶಿವಮೊಗ್ಗದ ಸರ್ಜಿ ಆಸ್ಪತ್ರೆ ವೈದ್ಯರ ತಂಡ ವೈದ್ಯಕೀಯ ತಪಾಸಣೆ ನಡೆಸಿತು.
ಬಿಜೆಪಿತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಬೆಳಗೋಡು, ಪ್ರಮುಖರಾದ ಎನ್.ಆರ್. ದೇವಾನಂದ್, ಉಮೇಶ ಕಂಚುಗಾರ್, ಸುರೇಶ್ ಸ್ವಾಮಿರಾವ್, ರವಿ ಕಾಳಿಕಾಪುರ, ಮತ್ತಿಮನೆ ಸುಬ್ರಹ್ಮಣ್ಯ, ಡಾ. ಧನಂಜಯ ಸರ್ಜಿ, ಎ.ವಿ. ಮಲ್ಲಿಕಾರ್ಜುನ್, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ವಿನಾಯಕ, ನಾಗರ್ಜುನ ಸ್ವಾಮಿ ಇದ್ದರು.
ವಿಕ್ರಮ್ ಉಡುಪ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.