ಶಿಕಾರಿಪುರ: ಶಿವಮೊಗ್ಗ–ಶಿಕಾರಿಪುರ–ಆನವಟ್ಟಿ, ಹಾನಗಲ್–ತಡಸ ಮಾರ್ಗದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು, ಹುಬ್ಬಳಿ ನಗರಕ್ಕೆ ಸಂಚರಿಸಲು ಜನರಿಗೆ ಅನುಕೂಲವಾಗಿದೆ. ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಲು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದ ಐ.ಬಿ ಸರ್ಕಲ್ನಲ್ಲಿ ಶನಿವಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಹೆದ್ದಾರಿ ಮಧ್ಯೆ ಅಲಂಕೃತ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೆದ್ದಾರಿಯಲ್ಲಿ ಸಂಚರಿಸುವಾಗ ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗೃತರಾಗಿರಬೇಕು.ಸುಗಮ ಸಂಚಾರಕ್ಕೆ ಹೆದ್ದಾರಿ ನಿರ್ಮಾಣ ಸಹಕಾರಿಯಾಗಿವೆ. ಆದರೆ ಹೆದ್ದಾರಿಯಲ್ಲಿ ಅಪಘಾತ ಹೆಚ್ಚು ಸಂಭವಿಸುವುದರಿಂದ ಸಂಚರಿಸುವಾಗ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಹಾಗೂ ಸಂಚಾರ ನಿಯಮಗಳನ್ನು ಪಾಲಿಸಬೇಕುಎಂದು ಕಿವಿಮಾತು ಹೇಳಿದರು.
‘ಕುಮದ್ವತಿ ಸೇತುವೆಯಿಂದ ಕುಮದ್ವತಿ ಕಾಲೇಜಿನವರಿಗೆ ಹಾಗೂ ಕಿರಣ್ ಟಾಕೀಸ್ ಸರ್ಕಲ್ನಿಂದ ಆನಂದಪುರ ರಸ್ತೆಯಲ್ಲಿ ಅಲಂಕೃತ ದೀಪಗಳನ್ನು ಅಳವಡಿಸಲಾಗುವುದು. ಈ ದೀಪಗಳು ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲಿವೆ. ಶಿಕಾರಿಪುರ ತಾಲ್ಲೂಕನ್ನು ಮಾದರಿಯನ್ನಾಗಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುದಾನ ನೀಡಿದ್ದಾರೆ. ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹ 2 ಸಾವಿರ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಸಾಲಿ, ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಪ್ರೇಮಾ ಲೋಕೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಎಪಿಎಂಸಿ ಅಧ್ಯಕ್ಷ ರುದ್ರಮುನಿ, ಪುರಸಭೆ ಸದಸ್ಯರಾದ ಭದ್ರಾಪುರ ಫಾಲಾಕ್ಷ, ಗೋಣಿಪ್ರಕಾಶ್, ರೂಪಕಲಾ ಹೆಗಡೆ, ರೇಣುಕಾಸ್ವಾಮಿ, ಜೀನಳ್ಳಿ ಪ್ರಶಾಂತ್, ರೋಷನ್, ಸುರೇಶ್ ರಾಮಯ್ಯ, ಉಳ್ಳಿ ದರ್ಶನ್, ಜ್ಯೋತಿ ಹರಿಹರ ಸಿದ್ದು, ಎನ್.ಎಸ್. ಜಯಶ್ರೀ, ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳಾದ ಆನಂದ್ಸ್ವಾಮಿ, ವಾಸುದೇವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.