ADVERTISEMENT

ಮುಳುಗಡೆ ಸಂತ್ರಸ್ತ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 4:45 IST
Last Updated 1 ಅಕ್ಟೋಬರ್ 2022, 4:45 IST
ಶರಾವತಿ ಮುಳುಗಡೆ ಸಂತ್ರಸ್ತರು ಶುಕ್ರವಾರ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಶರಾವತಿ ಮುಳುಗಡೆ ಸಂತ್ರಸ್ತರು ಶುಕ್ರವಾರ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮರುವಸತಿಗಾಗಿ ನೀಡಿದ ಜಮೀನಿನ ದಾಖಲೆಗಳನ್ನು ಬದಲಾವಣೆ ಮಾಡದಿರುವ ಬಗ್ಗೆ ಶುಕ್ರವಾರ ಮುಳುಗಡೆ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಈ ಹಿಂದೆ ಸರ್ಕಾರವು 1959ರಿಂದ 69ರವರೆಗೆ ಶರಾವತಿ ನದಿಗೆ ಲಿಂಗನಮಕ್ಕಿ ಆಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪಿಸಿದೆ. ಈ ಮಹತ್ವದ ಯೋಜನೆಗೆ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲ್ಲೂಕಿನ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದು, ಈ ಸ್ಥಳದಲ್ಲಿ ವಾಸಿಸುತ್ತಿದ್ದ ರೈತರು, ಗೇಣಿದಾರರು, ಕುಲಕಸುಬು ಮಾಡುತ್ತಿದ್ದ ಕುಟುಂಬಗಳು ತಾವು ಸ್ವಾಧೀನವಿದ್ದ ಮನೆ, ಜಮೀನುಗಳನ್ನು ಹಾಗೂ ಇತರ ಸ್ವತ್ತುಗಳನ್ನು ಸರ್ಕಾರ ಭೂ ಸ್ವಾಧೀನ ಪಡಿಸಿಕೊಂಡಿದ್ದರಿಂದ ಸುಮಾರು 7 ಸಾವಿರಕ್ಕಿಂತ ಹೆಚ್ಚಿನ ಕುಟುಂಬಗಳು ನಿರಾಶ್ರಿತರಾಗಿದ್ದವು ಎಂದು ಮನವಿಯಲ್ಲಿ ತಿಳಿಸಿದರು.

ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಲು ಅರಣ್ಯ ಇಲಾಖೆ ಹೆಸರಿನಲ್ಲಿರುವ ಸಾಕಷ್ಟು ಜಮೀನನ್ನು ಅಂದಿನ ಕಾನೂನಿನನ್ವಯ ಸಾಕಷ್ಟು ನಡುವಳಿ ಮೂಲಕ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಇದುವರೆಗೂ ನಿರಾಶ್ರಿತರ ಹೆಸರಿಗೆ ಈ ಜಮೀನಿನ ದಾಖಲೆಗಳನ್ನು ಮಾಡಿಕೊಟ್ಟಿಲ್ಲ ಎಂದು ದೂರಿದರು.

ADVERTISEMENT

ಈಗಾಗಲೇ ಕಂದಾಯ ಇಲಾಖೆಗೆ ಹಸ್ತಾಂತರವಾಗಿ ಸಂತ್ರಸ್ತರಿಗೆ ವಿತರಿಸಿರುವ ಜಮೀನಿನ ಯಾವುದೇ ದಾಖಲೆ ಬದಲಾವಣೆ ಮಾಡದಂತೆ ಯಥಾ ಸ್ಥಿತಿ ಕಾಪಾಡಿಕೊಂಡು ಹೋಗಬೇಕು. ಸರ್ಕಾರದಿಂದ ಪೂರ್ವಾನುಮತಿ ಪಡೆಯುವ ಪ್ರಕ್ರಿಯೆ ಶೀಘ್ರ ಮಾಡಬೇಕು ಎಂದು ಸಂತ್ರಸ್ತ ರೈತರು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಮುಖರಾದ ತೀ.ನಾ.ಶ್ರೀನಿವಾಸ್, ಎಂ.ಬಿ.ರಾಜು, ಎಸ್.ಬಿ. ಧರ್ಮರಾಜ್, ನಾರಾಯಣಪ್ಪ, ರಘುಪತಿ, ಸುರೇಶ, ಮೋಹನ, ರಮೇಶ್, ಗಣಪತಿ, ಚಂದ್ರಪ್ಪ, ಲಕ್ಷ್ಮಣಪ್ಪ, ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.