ಶಿವಮೊಗ್ಗ: ಹೊರರಾಜ್ಯಗಳಿಂದ ಬಂದ 12 ಜನರನ್ನು ಬಾಪೂಜಿ ನಗರದ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲು ಸ್ಥಳೀಯರು ಬುಧವಾರ ಭಾರಿ ವಿರೋಧ ವ್ಯಕ್ತಪಡಿಸಿದರು.
ಜನರ ಹೋರಾಟಕ್ಕೆ ನಗರ ಪಾಲಿಕೆ ಉಪ ಮೇಯರ್ ಸಾಥ್ ನೀಡಿದ ಪರಿಣಾಮ ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಎರಡು ತಾಸು ಜಟಾಪಟಿ ನಡೆಯಿತು. ತಾಳ್ಮೆಯಿಂದಲೇ ಪರಿಸ್ಥಿತಿ ನಿಭಾಯಿಸಿದ ಪೊಲೀಸರು ಈ ವಿಷಯದಲ್ಲಿ ಜಿಲ್ಲಾಡಳಿತದ ನಿರ್ಧಾರವೇ ಅಂತಿಮ. ಅವರು ಹೇಳಿದಂತೆ ಉಳಿದವರು ನಡೆದುಕೊಳ್ಳಬೇಕು. ವಿರೋಧ ವ್ಯಕ್ತಪಡಿಸುವುದು ಕಾನೂನು ಬಾಹಿರ ಎಂದು ಮನವರಿಕೆ ಮಾಡಿಕೊಳ್ಳಲು ಯತ್ನಿಸಿದರು.
ಅಧಿಕಾರಿಗಳು, ಪೊಲೀಸರ ಮನವಿಯನ್ನೂ ಪರಿಗಣಿಸದ ಸ್ಥಳೀಯರು ಹಾಸ್ಟೆಲ್ನಲ್ಲಿದ್ದ ಟೇಬಲ್, ಮೇಜು, ಮಂಚ, ಹೂವಿನ ಕುಂಡಗಳನ್ನು ಹೊಡೆದು ಹಾಕಿದರು. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರು. ಕ್ವಾರಂಟೈನ್ಗೆ ಬಂದವರು ವಾಹನಗಳಲ್ಲೇ ಎರಡೂವರೆ ತಾಸು ಕಾಲ ಕಳೆದರು. ಕೊನೆಗೆ ಪೊಲೀಸರು ಲಘು ಲಾಠಿ ಬೀಸಿ ಗುಂಪು ಚದುರಿಸಿದರು.
ಹಾಸ್ಟೆಲ್ ಸುತ್ತಮುತ್ತಕೊಳಚೆ ಪ್ರದೇಶಗಳು ಹೆಚ್ಚಾಗಿವೆ.ಕ್ವಾರಂಟೈನ್ನಲ್ಲಿದ್ದ ವ್ಯಕ್ತಿ ಪರಾರಿಯಾದರೆ ಯಾರು ಜವಬ್ದಾರಿ? ಹೊರಗಡೆ ಓಡಾಡಿದರೆ ಅನಾಹುತಕ್ಕೆ ದಾರಿಯಾಗುತ್ತದೆ ಎಂದು ಸ್ಥಳೀಯರುಆಕ್ರೋಶ ವ್ಯಕ್ತಪಡಿಸಿದರು.
‘ಬಾಪೂಜಿ ನಗರದಲ್ಲಿ ಈಗಾಗಲೇ ಮೂರು ಕ್ವಾರಂಟೈನ್ ಕೇಂದ್ರಕ್ಕೆ ಮೂರು ಕಟ್ಟಡಗಳನ್ನುಬಳಸಿಕೊಳ್ಳಲಾಗಿದೆ. ಮತ್ತೊಂದು ಕೇಂದ್ರ ಬಳಸಿಕೊಳ್ಳುವ ಮುಂಚೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಜಿಲ್ಲಾಡಳಿತಸ್ಥಳೀಯರನ್ನು ಕಡೆಗಣಿಸಿದೆ’ ಎಂದು ಉಪ ಮೇಯರ್ ಸುರೇಖಾ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.