ADVERTISEMENT

ಶಾಲೆಗಳಲ್ಲಿ ಎಲ್‌ಕೆಜಿ: ಅಂಗನವಾಡಿ ಸಿಬ್ಬಂದಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 12:27 IST
Last Updated 12 ಜುಲೈ 2019, 12:27 IST
ಶಿವಮೊಗ್ಗದಲ್ಲಿ ಶುಕ್ರವಾರ ಅಂಗನವಾಡಿ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಅಂಗನವಾಡಿ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ಬಾಕಿ ಇರುವ ಗೌರವಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಅಂಗನವಾಡಿ ಸಿಬ್ಬಂದಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗವಾಡಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ 62,580 ಅಂಗನವಾಡಿ ಕೇಂದ್ರಗಳು, 3,331 ಮಿನಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಸೇರಿ 51.04 ಲಕ್ಷ ಫಲಾನುಭವಿಗಳಿದ್ದಾರೆ. ಇಂತಹ ಯೋಜನೆ ಸಬಲೀಕರಣಗೊಳಿಸುವ ಬದಲು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಎಲ್‌ಕೆಜಿ, ಯುಕೆಜಿ ಆರಂಭಿಸಿರುವುದು ಸರಿಯಾದ ನಿರ್ಧಾರವಲ್ಲ ಎಂದು ದೂರಿದರು.

ಅಂಗನವಾಡಿ ಕೇಂದ್ರಗಳಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿ ಶಾಲೆಗಳು ನಿರ್ವಹಿಸುವುದು ಸರಿಯಲ್ಲ. ಹಲವು ಜಿಲ್ಲೆಗಳಲ್ಲಿ ನಾಲ್ಕು ತಿಂಗಳಿಂದ ಗೌರವಧನ ಬಂದಿಲ್ಲ. ಕೋಳಿ ಮೊಟ್ಟೆ, ತರಕಾರಿ ಖರೀದಿಗೆ ಹಣ ನೀಡಿಲ್ಲ. ಅಡುಗೆ ಅನಿಲ ವಿತರಣೆ ಮಾಡಿಲ್ಲ. ಅಂಗನವಾಡಿ ಸಿಬ್ಬಂದಿ ಕಾಯಿಲೆ ಬಿದ್ದಾಗ, ಮರಣ ಹೊಂದಿದಾಗ ಹಣ ನೀಡುತ್ತಿಲ್ಲ. ನಿವೃತ್ತರಾದವರಿಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಎಲ್ಐಸಿ ಆಧಾರಿತ ಪಿಂಚಣಿ ಕೊಡಬೇಕು. ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಮಾನದಂಡ ಅನುಸರಿಸಬೇಕು. ನಿವೃತ್ತರಾದ ಕಾರ್ಯಕರ್ತರಿಗೆ, ಸಹಾಯಕರಿಗೆ ಇಡುಗಂಟು ತಕ್ಷಣ ಬಿಡುಗಡೆ ಮಾಡಬೇಕು. ನಿವೃತ್ತರಿಗೆ ಕನಿಷ್ಠ 3 ಸಾವಿರ ಪಿಂಚಣಿ ನೀಡಬೇಕು. ಸೇವಾ ಜ್ಯೇಷ್ಠತೆ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್, ಅಂಗನವಾಡಿ ಸಹಾಯಕಿಯರ ಸಂಘದ ಮುಖಂಡರಾದ ತುಳಸಿ ಪ್ರಭ, ಜಯಲಕ್ಷ್ಮಿ, ಆರ್.ಮಂಜುಳಾ, ಶೈಲಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.