ಶಿವಮೊಗ್ಗ: ರೈಲ್ವೆ ಇಲಾಖೆಹಿರಿಯ ನಾಗರಿಕರಿಗೆ ಪ್ರಯಾಣದಲ್ಲಿ ನೀಡಿರುವ ರಿಯಾಯಿತಿ ಸೌಲಭ್ಯ ವಾಪಸ್ ಪಡೆದಿರುವುದನ್ನು ವಿರೋಧಿಸಿ ಸೋಮವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ಕಪ್ಪುಪಟ್ಟಿ ಧರಿಸಿ ನಗರದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು. ನಂತರರೈಲ್ವೆ ಸ್ಟೇಷನ್ ಮಾಸ್ಟರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.
70 ವರ್ಷ ವಯೋಮಿತಿ ಮೀರಿದ ಹಿರಿಯ ನಾಗರಿಕರಿಗಷ್ಟೇ ರೈಲು ಪ್ರಯಾಣದ ಟಿಕೆಟ್ ದರದಲ್ಲಿ ರಿಯಾಯಿತಿ ಸೌಲಭ್ಯ ನೀಡಲು ರೈಲ್ವೆ ಇಲಾಖೆ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶೇ 50ರಷ್ಟು ರಿಯಾಯಿತಿ, 60 ವರ್ಷ ಮೇಲ್ಪಟ್ಟವರಿಗೆ ಶೇ 60ರಷ್ಟು ರಿಯಾಯಿತಿ ನೀಡುತ್ತಿತ್ತು. ಆದರೆ, ಈಗ ಅದನ್ನು ವಾಪಸ್ ಪಡೆದಿರುವುದು ಅವೈಜ್ಞಾನಿಕ ಹಾಗೂ ಅಮಾನವೀಯ ಕ್ರಮ ಎಂದು ದೂರಿದರು.
ಪರಿಷ್ಕೃತ ನೀತಿಯಲ್ಲಿ ನಾನ್ ಎಸಿ ಸ್ಲೀಪರ್ ಮತ್ತು ಸಾಮಾನ್ಯ ದರ್ಜೆಯ ಪ್ರಯಾಣದಲ್ಲಿ ಮಾತ್ರ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಲು ಮುಂದಾಗಿದೆ. ಇದೂ ಸರಿಯಲ್ಲ. ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಕೋಟ್ಯಂತರ ಹಣ ರಿಯಾಯಿತಿ ನೀಡುತ್ತದೆ. ಆದರೆ, ಈ ದೇಶದ ವಯೋವೃದ್ಧರಿಗೆ ಪ್ರಯಾಣ ಮಾಡಲು ಈ ರೀತಿಯ ಯೋಜನೆ ರದ್ದು ಮಾಡಿರುವುದು ವಿಪರ್ಯಾಸ. ಕೂಡಲೇ ಇದನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಹೊಳೆಮಡಿಲು ವೆಂಕಟೇಶ್, ಡಾ.ಶೇಖರ್ ಗೌಳೇರ್, ಆರ್.ಎ.ಚಾಬೂಸಾಬ್, ಪಿ.ಎ.ಕೃಷ್ಣಪ್ಪ, ಸಿ.ಈರಪ್ಪ, ಎನ್.ವರ್ತೇಶ್, ರಾಮಚಂದ್ರ, ನಾಗೇಶ್ ರಾವ್, ಶಂಕ್ರಾನಾಯ್ಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.