ಸಾಗರ: ‘ಮಳೆಯಿಂದ ಯಾವುದೇ ಮನೆಗಳಿಗೆ ಹಾನಿ ಸಂಭವಿಸಿದರೆ ತಕ್ಷಣ ಪರಿಹಾರ ವಿತರಿಸಲಾಗು ವುದು. ಈ ವಿಷಯದಲ್ಲಿ ವಿಳಂಬವಾದರೆ ಸಾರ್ವಜನಿಕರು ನನಗೆ ಮಾಹಿತಿ ನೀಡಬೇಕು’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದ್ದಾರೆ.
ಇಲ್ಲಿನ ಎಸ್.ಎನ್. ನಗರ ಬಡಾವಣೆಯಲ್ಲಿ ಮನೆಗಳಿಗೆ ಹಾನಿ ಸಂಭವಿಸಿದ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ನಷ್ಟ ಅನುಭವಿಸಿದವರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿ ಮಾತನಾಡಿದರು.
ಮಳೆಯಿಂದ ಹಾನಿ ಉಂಟಾದಾಗ ಪರಿಹಾರ ವಿತರಿಸುವ ವಿಷಯದಲ್ಲಿ ಮಾನವೀಯತೆ ತೋರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಧಿಕೃತ ಮನೆಗಳಿಗೂ ನಷ್ಟ ಉಂಟಾದರೆ ಪರಿಹಾರ ನೀಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಅಧಿಕಾರಿಗಳು ಪರಿಹಾರ ನಿಗದಿ ಮಾಡುವಾಗ ಉದಾರತೆ ತೋರಬೇಕು ಎಂದರು.
ಮಳೆಯಿಂದ ಹಲವೆಡೆ ರಸ್ತೆಗಳಿಗೆ ಹಾನಿ ಉಂಟಾಗಿದೆ. ಮಳೆಯ ಪ್ರಮಾಣ ಕಡಿಮೆಯಾದ ನಂತರಷ್ಟೆ ರಸ್ತೆಗಳ ರಿಪೇರಿ ಕಾರ್ಯ ಕೈಗೊಳ್ಳಲಾಗು ವುದು. ಕಳೆದ ಮೂರು ದಿನಗಳ ಕಾಲ ಮಳೆಯ ಕಾರಣಕ್ಕೆ ಶಾಲೆಗಳಿಗೆ ರಜೆ ನೀಡಲಾಗಿದೆ. ಮಕ್ಕಳ ಸುರಕ್ಷತೆ ವಿಷಯದಲ್ಲಿ ಪಾಲಕರು ಜಾಗ್ರತೆ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ನಗರಸಭೆ ಸದಸ್ಯರಾದ ಉಮೇಶ್, ಮಧುಮಾಲತಿ, ಗಣಪತಿ ಮಂಡಗಳಲೆ, ರವಿಕುಮಾರ್, ನಗರಸಭೆ ಪರಿಸರ ಎಂಜಿನಿಯರ್ ಮದನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.